ಹೊಸದಿಗಂತ ವರದಿ ಬಾಗಲಕೋಟೆ :
ನವನಗರದಲ್ಲಿ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣ ನಿರ್ಮಾಣ ಮಾಡಲು 12 ಎಕರೆ ಜಾಗವನ್ನು ನೀಡಲು ಬಿಟಿಡಿಎ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಬಿಟಿಡಿಎ ಕಚೇರಿಯ ಸಭಾಂಗಣದಲ್ಲಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು. ನವನಗರದಲ್ಲಿ ಹಾಕಿ ಕ್ರೀಡಾಂಗಣ ಹಾಗೂ ಇತರೆ ಕ್ರೀಡೆಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕ್ರೀಡಾಂಗಣ ಕ್ಕೆ ಜಾಗ ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಬಿಟಿಡಿಎಗೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ಹಾಗೂ ಕ್ರೀಡೆಯನ್ನು ಉತ್ತೇಜಿಸುವುದಕ್ಕಾಗಿ ನಿವೇಶನ ನೀಡಲು ನಿರ್ಣಯ ಕೈಗೊಳ್ಳಲಾಯಿತು ಎಂದರು.
ಖೆಲೋ ಇಂಡಿಯಾ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣವಾಗಲಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಲಿದೆ ಎಂದು ಹೇಳಿದರು.
ನವನಗರದಲ್ಲಿ ಹತ್ತಕ್ಕೂಹೆಚ್ಚು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಕಟ್ಟಲು ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿಗೆ ನಿವೇಶನ ನೀಡಲು ಹಾಗೂ 5 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಂಜೂರಿ ನೀಡಲಾಯಿತು ಎಂದು ಹೇಳಿದರು.
ಬಿಟಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ 2000 ಕ್ಕೂ ಹೆಚ್ಚು ಸಂತ್ರಸ್ತರಿಗೆ ನಿವೇಶನ ನೀಡಲಾಗಿದೆ ಎಂದರು.
ಬಿಟಿಡಿಎ ಸದಸ್ಯ ಕುಮಾರ ಯಳ್ಳಿಗುತ್ತಿ, ಟವಳಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಪುನರ್ವಸತಿ ಅಧಿಕಾರಿ ಗಣಪತಿ ಪಾಟೀಲ, ಶಿವಾನಂದಕೋಟಿ ಇದ್ದರು.