ಹೊಸದಿಗಂತ ವರದಿ ಕಂಪ್ಲಿ:
ರಾಯಚೂರು ಜಿಲ್ಲೆಯ ಕಂಪ್ಲಿಯಲ್ಲಿ ಕೋಟೆಗೆ ತೆರಳುವ ಹಾದಿಯಲ್ಲಿನ ಬೆನಕನ ಕಾಲುವೆ ಎದುರಿಗೆ ಮಹಾಸತಿ ಕಲ್ಲು ಪತ್ತೆಯಾಗಿದೆ.
ಬಿಳಿಕಾಡು ಕಲ್ಲಿನಲ್ಲಿ ಉಡುಗೆ ತೊಟ್ಟ ಮಹಿಳೆಯೊಬ್ಬಳ ಚಿತ್ರ ಕೆತ್ತಲಾಗಿದೆ. ಆಕೆಯ ಕಾಲು ಬಳಿ ಕಿರುಗತ್ತಿ ಸಿಕ್ಕಿಸಿಕೊಂಡ ವೀರನ ಚಿತ್ರವಿದೆ. ಇದು ಮಹಾಸತಿ ಕಲ್ಲು ಎನ್ನಲಾಗುತ್ತಿದೆ. ಮಹಾಸತಿ ಕಲ್ಲಿನ ಮೇಲ್ಬಾಗದಲ್ಲಿ ಸತಿಯ ಬಲಗೈ ತುಂಡಾಗಿದೆ. ಯಾವುದೇ ಅಕ್ಷರಗಳು ಕಂಡು ಬಂದಿಲ್ಲ.
ಇದು ಹದಿನೇಳನೇ ಶತಮಾನದ ಮಹಾಸತಿ ಕಲ್ಲಾಗಿದೆ. ವಿಜಯನಗರ ನಂತರ ಕಾಲದ ಮಹಾಸತಿ ಕಲ್ಲಿನಲ್ಲಿ ಅಕ್ಷರಗಳಿರುವುದಿಲ್ಲ. ಇದರಲ್ಲಿ ಮಹಾಸತಿ ತುರುಬು ಕಟ್ಟಿದ ಆಕರ್ಷಕ ಕೇಶಾಲಂಕಾರ, ದೊಡ್ಡ ಕಿವಿಯ ಆಭರಣ ತೊಟ್ಟಿದ್ದಾಳೆ. ಬಳೆ, ಕಡಗ, ತೋಳು ಕಡಗ ತೊಟ್ಟಿದ್ದಾಳೆ. ಕೊರಳಲ್ಲಿ ಹಾರ ಧರಿಸಿದ್ದಾಳೆ. ಬಲಗೈ ಎತ್ತಿ ಹರಸುತ್ತಿದ್ದಾಳೆ. ಎಡಗೈಯಲ್ಲಿ ನಿಂಬೆಹಣ್ಣು ಹಿಡಿದಿದ್ದು, ಶುಭ ಸೂಚಕವಾಗಿದೆ.
ವೀರನೊಬ್ಬ ಹೋರಾಟದಲ್ಲಿ ಮರಣವನ್ನಪ್ಪಿದ್ದರಿಂದ ಮಹಾಸತಿಯಾದ ಸನ್ನಿವೇಶವಿರಬಹುದು ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಈ ಮಹಾಸತಿ ಕಲ್ಲನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.