ಹೊಸದಿಗಂತ ವರದಿ, ಹಾವೇರಿ(ಬ್ಯಾಡಗಿ) :
ನಿಖರ ಮಾಹಿತಿಯನ್ನಾಧರಿಸಿ ಕೈ ಕಾರ್ಯಕರ್ತನೊಬ್ಬನ ಮನೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಲೆಕ್ಕಕ್ಕೆ ಸಿಗದ ೨.೮೫ ಕೋಟಿ ರೂ.ಗಳನ್ನು ವಶಸಿಕೊಂಡ ಘಟನೆ ಜಿಲ್ಲೆಯ ಬ್ಯಾಡಗಿ ಪಟ್ಟಣದ ವಿದ್ಯಾ ನಗರದಲ್ಲಿ ಭಾನುವಾರ ನಡೆದಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವ ಚನ್ನಬಸಪ್ಪ ಹುಲ್ಲತ್ತಿ ಎಪಿಎಂಸಿ ಮಾಜಿ ಅಧ್ಯಕ್ಷರಾಗಿದ್ದಾರೆ. ಕೈ ಅಭ್ಯರ್ಥಿ ಬಸವರಾಜ ಶಿವಣ್ಣನವರ ಆಪ್ತರಾಗಿರುವರು. ಮತದಾನಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ ಈ ಐಟಿ ದಾಳಿ ನಡೆದಿದ್ದು ಸಾರ್ವಜನಿಕರಲ್ಲಿ ಸಂಚಲನ ಮೂಡಿಸಿದೆ.
ಶನಿವಾರ ರಾತ್ರಿ ೧೨ ಗಂಟೆಯ ಸುಮಾರಿಗೆ ದಾಳಿ ನಡೆಸಿರುವ ಅಧಿಖಾರಿಗಳ ತಂಡವು ಭಾನುವಾರ ಸಂಜೆಯವರೆಗೂ ಶೋಧನಾ ಕಾರ್ಯ ನಡೆಸಿದೆ. ಶೋಧನೆ ವೇಳೆ ಕೆಲ ದಾಖಲೆಗಳು ಸಿಕ್ಕಿರುವುದಾಗಿ ತಿಳಿದು ಬಂದಿದೆ.
ಮೂಲತಹ ಬ್ಯಾಡಗಿ ತಾಲೂಕಿನ ಶಿಡೇನೂರ ಗ್ರಾಮದವರಾದ ಚನ್ನಬಸಪ್ಪ ಹುಲ್ಲತ್ತಿ ಪಟ್ಟಣದ ವಿದ್ಯಾನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸವಿದ್ದರು, ಬ್ಯಾಡಗಿ ಎಪಿಎಂಸಿ ಯಾರ್ಡನಲ್ಲಿರುವ ಸಿ.ಕೆ.ಎಲಿ ಮತ್ತು ಕಂ.ಇವರ ಮೆಣಸಿನಕಾಯಿ ಅಂಗಡಿಯಲ್ಲಿ ವ್ಯವಸ್ಥಾಪಕರಾಗಿ ಹಾಗೂ ಅವರದೇ ಅಮೋಘ ಕೋಲ್ಡ್ ಸ್ಟೋರೇಜ್ ಪಾಲುದಾರರಾಗಿರುವರು ಎಂದು ಹೇಳಲಾಗುತ್ತಿದೆ.