ಹೊಸದಿಗಂತ ಡಿಜಿಟಲ್ ಡೆಸ್ಕ್
2019 ರ ಪಂಬಾಬ್ ನ ತರ್ನ್ ಪ್ರದೇಶದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬೇಕಾಗಿದ್ದ ಖಲಿಸ್ತಾನಿ ಉಗ್ರ ಬಿಕ್ರಮ್ಜಿತ್ ಸಿಂಗ್ನನ್ನು ಅಸ್ಟ್ರೀಯಾ ದೇಶ ಗಡಿಪಾರು ಮಾಡಿದ್ದು, ಆತ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಲೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರಿಯಾದ ಲಿಂಜ್ನ ಅಧಿಕಾರಿಗಳು ಇಂಟರ್ಪೋಲ್ನ ಸಮನ್ವಯದೊಂದಿಗೆ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಿಕ್ರಂಜಿತ್ ಸಿಂಗ್ ಅಲಿಯಾಸ್ ಬಿಕ್ಕರ್ ಪಂಜ್ವಾರ್ ಈಗ ಭಾರತದ ವಶದಲ್ಲಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊಹಾಲಿಯ NIA ವಿಶೇಷ ನ್ಯಾಯಾಲಯ ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಹಾಗೂ ರೆಡ್ ನೋಟಿಸ್ ಹೊರಡಿಸಿತ್ತು. ಸಿಂಗ್ ನನ್ನು ಮಾರ್ಚ್ 22, 2021 ರಂದು ಲಿಂಜ್ನಲ್ಲಿ ಬಂಧಿಸಲಾಗಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.
ಸಿಂಗ್ ಪ್ರಕರಣದ ಸಹ-ಆರೋಪಿಗಳನ್ನು ಮತ್ತು ಇತರರನ್ನು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಪ್ರಚೋದನೆ ನೀಡಿದ್ದಲ್ಲದೆ, ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ತಯಾರಿಸಲು ಮತ್ತು ಅವುಗಳನ್ನು ಬಳಸುವ ತರಬೇತಿಯನ್ನು ಸಹ ನಡೆಸಿದ್ದಾನೆ ಎಂದು ಎನ್ಐಎ ತನಿಖೆಯು ತೋರಿಸಿದೆ.
ವಿವಿಧ ಮೆರವಣಿಗೆಗಳು ಮತ್ತು ಆಂದೋಲನಗಳ ಸಮಯದಲ್ಲಿ ಅವರು ಬಾಂಬ್ಗಳನ್ನು ಸ್ಫೋಟಿಸಲು ಸಿದ್ಧತೆ ನಡೆಸಿದ್ದರು. ಡೇರಾ ಮುರಾದಪುರವನ್ನು ಗುರಿಯಾಗಿಸುವ ಸಂಚಿನಲ್ಲಿ ಸಿಂಗ್ ಪ್ರಮುಖ ಸಂಚುಕೋರ ಎಂದು ಎನ್ಐಎ ಹೇಳಿದೆ. 2019 ರ ಪಂಜಾಬ್ನಲ್ಲಿ ನಡೆದ ತರ್ನ್ ತರಣ್ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಒಂಬತ್ತು ಖಾಲಿಸ್ತಾನ್ ಉಗ್ರರ ವಿರುದ್ಧ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿತ್ತು, ಇದರಲ್ಲಿ ಭಯೋತ್ಪಾದಕ ಸಂಚಿನಲ್ಲಿ ಭಾಗಿಯಾಗಿದ್ದ ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ.
ಸೆಪ್ಟೆಂಬರ್ 4, 2019 ರಂದು, ತರ್ನ್ ತರನ್ನ ಪಂಡೋರಿ ಗೋಲಾ ಗ್ರಾಮದ ಹೊರವಲಯದಲ್ಲಿರುವ ಖಾಲಿ ಜಾಗದಲ್ಲಿ ಪ್ರಬಲ ಸ್ಫೋಟ ಸಂಭವಿಸಿ ಇದರಲ್ಲಿ ಇಬ್ಬರು ದಾಳಿಕೋರರೇ ಸಾವನ್ನಪ್ಪಿದ್ದರು. ಇನ್ನೊಬ್ಬರು ತೀವ್ರವಾಗಿ ಗಾಯಗೊಂಡರು. ಅವರು ಬಚ್ಚಿಟ್ಟ ಸ್ಫೋಟಕಗಳನ್ನು ಹಿಂಪಡೆಯಲು ಹೊಂಡವನ್ನು ಅಗೆಯುತ್ತಿದ್ದಾಗ ಸ್ಫೋಟ ಸಂಭವಿಸಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ