ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಲ್ಲದೆ ಸಾಕಷ್ಟು ಮಂದಿ ಪರದಾಡುತ್ತಿದ್ದಾರೆ. ಆದರೆ ಇಂಥ ಸಂದರ್ಭದಲ್ಲೂ ಕುಡಿಯುವ ನೀರನ್ನು ಬಳಕೆ ಮಾಡಿ ಕಾರ್ ತೊಳೆದ 22 ಮಂದಿಗೆ ದಂಡ ವಿಧಿಸಲಾಗಿದೆ.
ಈ ರೀತಿ ಕುಡಿಯುವ ನೀರನ್ನು ಕಾರ್ ತೊಳೆಯಲು ಬಳಸಬಾರದು ಎನ್ನುವ ಆದೇಶ ಇದ್ದರೂ ಕಾವೇರಿ ಹಾಗೂ ಕೊಳವೆ ಬಾವಿ ನೀರನ್ನು ಬಳಕೆ ಮಾಡಿದ್ದ 22 ಮಂದಿಯಿಂದ ಜಲಮಂಡಳಿ 1.10 ಲಕ್ಷ ರೂಪಾಯಿ ವಸೂಲಿ ಮಾಡಿದೆ.
ಜಲಮಂಡಳಿ ಕಟ್ಟುನಿಟ್ಟಿನ ಆದೇಶ ಲೆಕ್ಕಿಸದ ಕೆಲವರು ಕುಡಿಯಲು ಮತ್ತು ಗೃಹ ಬಳಕೆಗೆ ಬಳಸಲಾಗುವ ನೀರಿನಲ್ಲಿಯೇ ವಾಹನಗಳನ್ನು ತೊಳೆಯುತ್ತಿರುವುದು ಕಂಡು ಬಂದಿದೆ. ಜಲಮಂಡಳಿಯು ಸೋಮವಾರದಿಂದ ವಿಶೇಷ ತಪಾಸಣಾ ಕಾರ್ಯ ಕೈಗೊಂಡಿದೆ.