ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರಂತರವಾಗಿ ಸುರಿದ ಮುಸಲಧಾರೆಗೆ ಗುಜರಾತ್ ಅಕ್ಷರಶಃ ತತ್ತರಿಸಿದೆ. ರಾಜ್ಯದ 251 ತಾಲೂಕುಗಳ ಪೈಕಿ 230ಕ್ಕೂ ಹೆಚ್ಚು ತಾಲೂಕುಗಳಲ್ಲಿ ಗುಡುಗು, ಮಿಂಚು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಸೋಮವಾರ ರಾಜ್ಯದ ಹಲವೆಡೆ ಸಿಡಿಲು ಬಡಿದು 27 ಜನ ಹಾಗೂ 71 ಜಾನುವಾರಗಳು ಪ್ರಾಣ ಬಿಟ್ಟಿವೆ.
ದೌದ್, ಭರೂಚ್, ತಾಪಿ, ಅಹಮದಾಬಾದ್, ಅಮ್ರೆಲ್ಲಿ, ಬನಸ್ಕಾಂತ, ಬೋತದ್, ಖೇಡಾ, ಮೆಹ್ ಸನಾ, ಪಂಚ ಮಹಲ್, ಸಬರ್ ಕಾಂತ, ಸೂರತ್, ಸುರೇಂದ್ರನಗರ ಮತ್ತು ದೇವಭೂಮಿ ದ್ವಾರಕಾದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ವರದಿಯಾಗಿವೆ. ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ ನೀಡಿದ ಮಾಹಿತಿಯ ಪ್ರಕಾರ, ಸೋಮವಾರ ಮಧ್ಯಾಹ್ನದ ವೇಳೆಗೆ 71 ಜಾನುವಾರುಗಳು ಸಾವನ್ನಪ್ಪಿವೆ. ಭಾರೀ ಮಳೆಯಿಂದಾಗಿ 23 ಮಂದಿ ಗಾಯಗೊಂಡಿದ್ದು, 29 ಮನೆಗಳು ಹಾನಿಗೊಳಗಾಗಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ರಾಜ್ಯ ಆಡಳಿತವು ಪರಿಹಾರ ಕಾರ್ಯದಲ್ಲಿ ತೊಡಗಿದೆ ಭಯಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಎರಡು ದಿನಗಳಲ್ಲಿ ರಾಜ್ಯದ ಸುಮಾರು 60 ರಷ್ಟು ಭಾಗದಲ್ಲಿ 1 ಮಿ.ಮೀ ನಿಂದ 144 ಮಿ.ಮೀ ವರೆಗಿನ ಮಳೆಯಾಗಿದ್ದು, ಬೆಳೆಗಳಿಗೆ ನಷ್ಟವಾಗಿದೆ. ಅಕಾಲಿಕ ಮಳೆ, ಆಲಿಕಲ್ಲು ಮತ್ತು ಸಿಡಿಲು ಬಡಿತದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲಿದೆ.