ಹೊಸ ದಿಗಂತ ವರದಿ, ಯಲ್ಲಾಪುರ:
ಯಲ್ಲಾಪುರ ತಾಲೂಕಿನ ಕಿರವತ್ತಿ, ಮದನೂರು ಹಾಗೂ ಮುಂಡಗೋಡ ತಾಲೂಕಿನ ಮೈನಳ್ಳಿ, ಗುಂಜಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 100 ಕೆರೆಗಳಿಗೆ ರೂ. 274.50 ಕೋಟಿ ವೆಚ್ಚದಲ್ಲಿ ಬೇಡ್ತಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಶ್ರಮದಿಂದಾಗಿ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿದ್ದು, ಮಳೆ ನೀರನ್ನು ನಂಬಿ ಕೃಷಿ ಮಾಡುವ ಸಾವಿರಾರು ರೈತರ ಸಂಕಷ್ಟ ದೂರವಾಗಲಿದೆ.
ಈ ಮೊದಲು ಮುಂಡಗೋಡ ಮತ್ತು ಬನವಾಸಿಯಲ್ಲಿ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಸಚಿವ ಶಿವರಾಮ ಹೆಬ್ಬಾರ್ ಶ್ರಮವಹಿಸಿದ್ದು, ಇವುಗಳಲ್ಲಿ ಸಾಕಷ್ಟು ಯೋಜನೆಗಳಿಗೆ ಅನುದಾನ ಮಂಜೂರಾಗಿದೆ. ಮುಂಡಗೋಡ ತಾಲೂಕಿನ ನೀರಾವರಿ ಯೋಜನೆ ಅಂತಿಮ ಹಂತದಲ್ಲಿದೆ ಹಾಗೂ ಬನವಾಸಿಯ ವರದಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಶೀಘ್ರ ಉದ್ಘಾಟನೆಗೊಳ್ಳಲಿದೆ.