ಹೊಸದಿಗಂತ ವರದಿ ವಿಜಯಪುರ :
ರಾಜ್ಯದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದೇ ಕಾಂಗ್ರೆಸ್ನವರು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಅವಧಿ ಬಿಟ್ಟರೆ, ರಾಜ್ಯದ ಇತಿಹಾಸದಲ್ಲಿ ಐದು ವರ್ಷದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಖ್ಯಾತಿ ಸಿದ್ದರಾಮಯ್ಯ ಸರ್ಕಾರದ್ದಾಗಿದೆ. ಬಜೆಟ್ ನಲ್ಲಿ ಎಷ್ಟು ಅನುಷ್ಠಾನ ಆಗಿದೆ ಎಂಬುದು ಲೆಕ್ಕ ಇದೆ. ಅದನ್ನು ವಿಧಾನಸಭೆಯಲ್ಲಿ ರಿಪೋರ್ಟ್ ಕೊಡುತ್ತೇವೆ ಎಂದರು.
ಮಾಜಿ ಸಚಿವ ಜಿ. ಪರಮೇಶ್ವರ ಬುದ್ಧಿವಂತರು. ಪ್ರಣಾಳಿಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅವರ ಆಂತರಿಕ ವಿಚಾರವಾಗಿದೆ. ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಆದರೆ
ಎಲ್ಲವನ್ನು ಅರ್ಥ ಮಾಡಿಕೊಂಡವರು ಪರಮೇಶ್ವರ್, ಅವರು ಈ ರೀತಿ ವ್ಯಕ್ತಪಡಿಸಿದ್ದಾರೆ ಅಂದರೆ ನೀವು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಕದಂತೆ ಶ್ರೀರಾಮಸೇನೆ ಒತ್ತಾಯಿಸಿದ್ದಾರೆ. ಆದರೆ ಕಾರ್ಕಳದಲ್ಲಿ ಸಚಿವ ಸುನೀಲಕುಮಾರ ಇದ್ದಾರೆ, ಮೂರು ಸಲ ಗೆದ್ದಿದ್ದಾರೆ ಮತ್ತು ಮಂತ್ರಿ ಕೂಡ ಆಗಿದ್ದಾರೆ. ಶ್ರೀರಾಮ ಸೇನೆ ಮನವಿ ಮಾಡಿದ್ದಾರೆ ಆದರೆ ಇದು ಸಹಜವಾದುದು. ನಮ್ಮದು ರಾಷ್ಟ್ರೀಯ ಪಕ್ಷ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದರು.
ಮೊದಲು ತಮ್ಮ ಕಾಂಗ್ರೆಸ್ ಶಾಸಕರನ್ನು ಗಟ್ಟಿಯಾಗಿ ಇಟ್ಟುಕೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಅವರಂತೆ ನಾನು ಏನೇನೋ ಮಾತನಾಡಲ್ಲ. ಅವರು ಹೋದಲ್ಲೆಲ್ಲ ಇರುವ ಕಾಂಗ್ರೆಸ್ ಶಾಸಕರನ್ನು ಗಟ್ಟಿಯಾಗಿ ಇಟ್ಟುಕೊಳ್ಳಲಿ ಎಂದರು.