ಹೊಸದಿಗಂತ ವರದಿ ಬೀದರ್:
ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಅ.29, 30 ಹಾಗೂ 31ರಂದು ರಾಯರ 355ನೇ ಆರಾಧನಾ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುವುದು ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಮೂರು ದಿನಗಳ ಕಾಲ ಬೆಳಿಗ್ಗೆ ರಾಯರ ಅಷ್ಟೋತ್ತರ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅ.29ರಂದು ಪೂರ್ವಾರಾಧನೆ ಅಂಗವಾಗಿ ಪಾಲಕಿಯಲ್ಲಿ ಗ್ರಾಮ ಪ್ರದಕ್ಷಿಣೆ ನಡೆಯಲಿದ್ದು, ಸ್ವಯಂ ಸೇವಕರಿಂದ ವಿಶೇಷ ಹೂವಿನ ಅಲಂಕಾರ ಸೇವೆ ನೆರವೇರಲಿದೆ.
ಸಂಜೆ ಸಂಗೀತ ದರ್ಬಾರ್
ಅ.30ರಂದು ಮಧ್ಯಾರಾಧನೆಯಂದು ವಿಶೇಷ ಹೂವಿನ ಅಲಂಕಾರ ಹಾಗೂ ರಥೋತ್ಸವ ನಡೆಯಲಿದೆ. ಅ.31ರಂದು ಉತ್ತರಾರಾಧನೆಯಂದು ತುಳಸಿ ಅಲಂಕಾರ ಸೇವೆ ನಡೆಯಲಿದ್ದು, ಸಂಜೆ ಸ್ಥಳೀಯ ಕಲಾವಿದರಿಂದ ಸಂಗೀತ ದರ್ಬಾರ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೂರು ದಿನಗಳ ಕಾಲ ಭಕ್ತರಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಆರಾಧನಾ ಮಹೋತ್ಸವದ ಸಂಪೂರ್ಣ ವ್ಯವಸ್ಥೆಯನ್ನು ಗುರುರಾಜ ಸೇವಾ ಸಂಘದ ವತಿಯಿಂದ ಕೈಗೊಳ್ಳಲಾಗುವುದು ಎಂದು ಮಠದ ವ್ಯವಸ್ಥಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.



