ಹೊಸದಿಗಂತ ಡಿಜಿಟಲ್ ಡೆಸ್ಕ್:
ದಟ್ಟವಾದ ಹೊಗೆ ಮತ್ತು ಹಿಮದ ಪ್ರಭಾವದಿಂದ ಹರಿಯಾಣದ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಬೆಳ್ಳಂಬೆಳಗ್ಗೆ ರಸ್ತೆ ಸರಿಯಾಗಿ ಕಾಣದ ಕಾರಣ 15 ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅಂಬಾಲಾ-ಯಮುನಾ ನಗರ-ಸಹಾರನ್ಪುರ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಹರಿಯಾಣ ಸಂಚಾರ ಪೊಲೀಸರು ಘಟನೆಯ ವಿವರಗಳನ್ನು ತಡವಾಗಿ ಬಹಿರಂಗಪಡಿಸಿದ್ದಾರೆ.
ನಿನ್ನೆ ಬೆಳಗ್ಗೆ ಹಿಮದಿಂದಾಗಿ ಹೆದ್ದಾರಿಯಲ್ಲಿ ರಸ್ತೆ ಕಾಣಿಸದ ಪರಿಣಾಮ ಹಿಂದಿನಿಂದ ಬಂದ ವಾಹನ ಮುಂದೆ ಹೋಗುತ್ತಿದ್ದ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮುಂದೆ ಬರುತ್ತಿದ್ದ ವಾಹ ಹೆದ್ದಾರಿಯಲ್ಲಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಹೀಗೆ ರಸ್ತೆಯಲ್ಲಿ ಸುಮಾರು 15 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದವು. ಟ್ರಾಫಿಕ್ ಜಾಮ್ನಿಂದಾಗಿ ಕಿರಿಕಿರಿ ಅನುಭವಿಸುತ್ತದ್ದನ್ನು ನೋಡಿದ ಕೆಲವರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಚಾರ ಪೊಲೀಸರು ಹಾಗೂ ಇತರೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಾಹನಗಳಲ್ಲಿ ಸಿಲುಕಿದ್ದ ಜನರು ಹಾಗೂ ಅಪಘಾತಕ್ಕೀಡಾದವರನ್ನು ಹೊರತೆಗೆಯಲಾಯಿತು. ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಕ್ರೇನ್ಗಳನ್ನು ತಂದು ವಾಹನಗಳನ್ನು ತೆರವುಗೊಳಿಸಿದರು.
ಈ ನಡುವೆ ಇತರೆ ವಾಹನಗಳಿಗೆ ತೊಂದರೆಯಾಗದಂತೆ ಬದಲಿ ಮಾರ್ಗದಲ್ಲಿ ವಾಹನಗಳನ್ನು ತಿರುಗಿಸಲಾಗಿದೆ. ಒಟ್ಟು 15 ವಾಹನಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಹತ್ತಾರು ವಾಹನ ಸವಾರರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಟ್ಟ ಮಂಜಿರುವ ಕಾರಣ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.