ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ರಾಜಕೀಯವೇ ಬೆಳಗಾವಿಗೆ ಶಿಫ್ಟ್ ಆಗಿದೆ. ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಹತ್ತು ದಿನಗಳ ಕಾಲ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ಎಲ್ಲಾ ನಾಯಕರು ಬೆಳಗಾವಿ ತಲುಪಿದ್ದು, ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ನಡೆಸಿದ್ದು, ಈ ಬಾರಿ ಸದನದಲ್ಲಿ ಕಾವು ಹೆಚ್ಚಾಗಲಿದೆ. ಬೆಳಗಾವಿ ಗಡಿ ವಿವಾದ ಮುನ್ನಲೆಯಲ್ಲಿದ್ದು, ವಿರೋಧ ಪಕ್ಷಗಳಿಗೆ ದಾಳವಾಗಲಿದೆ. ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಪ್ರತಿಪಕ್ಷಗಳ ಆರೋಪ ಪ್ರತ್ಯಾರೋಪಗಳಿಗೆ ಈ ಅಧಿವೇಶನ ಸಾಕ್ಷಿಯಾಗಲಿದೆ. ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಅಧಿವೇಶನ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮಹತ್ವದ್ದಾಗಿದೆ.
ವಿಪಕ್ಷಗಳ ʻಹಸ್ತʼದಲ್ಲಿದೆ ವಿವಿಧ ವಿಷಯಗಳು
ಪ್ರತಿಪಕ್ಷಗಳು ಆಡಳಿತಾರೂಢ ಪಕ್ಷದ ವಿರುದ್ಧ ಮುಗಿಬೀಳು ಈಗಾಗಲೇ ಹಲವು ವಿಷಯಗಳನ್ನ ಪಟ್ಟಿಮಾಡಿಕೊಂಡಿದೆ. ಮುಖ್ಯವಾಗಿ ಬೆಳಗಾವಿ ಗಡಿ ವಿವಾದ, ಮಂಗಳೂರು ಕುಕ್ಕರ್ ಬ್ಲಾಸ್ಟ್, ಕಮಿಷನ್ ಆರೋಪ, ಮತದಾರರ ಮಾಹಿತಿ ಕಳ್ಳತನ, ಕೋಮು ಗಲಭೆ, ರೈತರ ಬೇಡಿಕೆಗಳು, ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ, ಎಸ್-ಎಸ್ಟಿಗೆ ಮೀಸಲಾತಿ ನೀಡಿರುವ ವಿಚಾರವೂ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.