ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿದ್ರೆಗೆ ಜಾರಿದ್ದವರ ಮೇಲೆ ಲಾರಿಯೊಂದು ಹರಿದ ಪರಿಣಾಮ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ತಾಲೂಕಿನಲ್ಲಿ ನಡೆದಿದೆ.
ನಂದೂರ ಬಳಿ ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ. ರಸ್ತೆ ಬದಿ ನಿರ್ಮಿಸಿದ್ದ ಗುಡಿಸಲಿನಲ್ಲಿ ಕಾರ್ಮಿಕರು ವಾಸವಾಗಿದ್ದು, ಸುಮಾರು ಹತ್ತು ಮಂದಿ ಮಲಗಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದೆ. ಅದರ ಪರಿಣಾಮ
ಮಲಗಿದ್ದ ಕಾರ್ಮಿಕರ ಮೇಲೆಯೇ ಲಾರಿ ಹರಿದಿದೆ. ಘಟನೆಯಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಲ್ಕಾಪುರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಕಾರ್ಮಿಕರೆಲ್ಲರೂ ಮಧ್ಯಪ್ರದೇಶ ಮೂಲದವರಾಗಿದ್ದು, ರಸ್ತೆ ಕಾಮಗಾರಿಗಾಗಿ ಕೆಲಸಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.