ಹೊಸದಿಗಂತ ವರದಿ ಬಳ್ಳಾರಿ:
ಗಡಿ ಭಾಗದ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದು, ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 400 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದ ರಾಘವ ಕಲಾಮಂದಿರದ ನಾಡೋಜ ದಿ.ಸುಭದ್ರಮ್ಮ ಮನ್ಸೂರ್ ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಳ್ಳಾರಿ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೈಗಾರಿಕಾ ಘಟಕಗಳಲ್ಲಿ ಶೇ.80 ರಷ್ಟು ಕನ್ನಡಗರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಈ ಕುರಿತು ನಮ್ಮ ಸಿ.ಎಂ.ಬೊಮ್ಮಾಯಿ ಅವರು ಕಳೆದ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಘೋಷಿಸಿದ್ದಾರೆ, ಗಡಿಭಾಗದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು 100 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಕಸಾಪ ಜಿಲ್ಲಾಧ್ಯಕ್ಷರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಸಲ್ಲಿಸಿದ್ದು, ನಮ್ಮ ಸರ್ಕಾರ, ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿವಿಗಾಗಿ ಶ್ರಮಿಸಲು ಮುಂದಾಗಿರುವ ಜಿಲ್ಲಾಧ್ಯಕ್ಷರಿಗೆ ಇದರಿಂದ ಅನುಕುಲವಾಗಲಿದೆ ಎಂದರು.
ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ, ಭಾಷೆ ಉಳಿವಿಗಾಗಿ ಪ್ರತಿಯೋಬ್ಬರೂ ಶ್ರಮಿಸಬೇಕು, ನಮ್ಮ ಸರ್ಕಾರ ಗಡಿನಾಡ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ ಎಂದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ರಮೇಶ್ ಗೌಡ ಪಾಟೀಲ್ ಅವರು ಮಾತನಾಡಿದರು.