ಹೊಸದಿಗಂತ ವರದಿ ವಿಜಯಪುರ:
ನಗರ ಹೊರ ವಲಯದ ಅಲಿಯಾಬಾದ ಕೈಗಾರಿಕಾ ಪ್ರದೇಶದ ರಾಜಗುರು ಫುಡ್ಸ್ ನ
ಬೃಹತ್ ಗೋದಾಮಿನಲ್ಲಿ ನೂರಾರು ಮೆಕ್ಕೆಜೋಳ ಚೀಲಗಳಡಿ ಸಿಲುಕಿದ್ದ ಕಾರ್ಮಿಕರಲ್ಲಿ 5 ಮಂದಿಯ ಶವ ಪತ್ತೆಯಾಗಿದೆ.
ರಾಜೇಶ ಮುಖಿಯಾ (25), ರಾಮಬೀಜ್ ಮುಖಿಯಿ (29), ಶಂಭು ಮುಖಿಯಾ (26), ಲಕನೌವ್ ಜಾಧವ, ರಾಮ ಪಾಲಕ್ ಎಂಬವರ ಶವ ಪತ್ತೆಯಾಗಿವೆ.
ಇಲ್ಲಿನ ರಾಜಗುರು ಫುಡ್ಸ್ ನ ಬೃಹತ್ ಗೋದಾಮು ಮೆಕ್ಕೆ ಜೋಳ ಸಂಸ್ಕರಣ ಘಟಕವಾಗಿದ್ದು, ಸೋಮವಾರ ಸಂಜೆ ಮೆಕ್ಕೆಜೋಳ ಚೀಲಗಳು ಪಲ್ಟಿಯಾಗಿ ಕಾರ್ಮಿಕರು ಚೀಲಗಳಡಿ ಸಿಲುಕಿದ್ದರು. ನಿನ್ನೆ ರಾತ್ರಿ 4 ಜನರನ್ನು ರಕ್ಷಣೆ ಮಾಡಲಾಗಿತ್ತು. ಇನ್ನು ಐದಾರು ಕಾರ್ಮಿಕರಿರುವ ಬಗ್ಗೆ ಅಂದಾಜಿಸಲಾಗಿದ್ದು, ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಕಲಬುರಗಿಯ ಎಸ್ಡಿಆರ್ಎಫ್ ತಂಡ ಮೃತದೇಹ ಶೋಧ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. 26 ಜನರ ತಂಡದಿಂದ ಸಂಸ್ಕರಣಾ ಯುನಿಟ್ ಕೆಳಗೆ ಸಿಕ್ಕಿರುವ ಕಾರ್ಮಿಕರ ಮೃತ ದೇಹಗಳು ಹುಡುಕಾಟ ಮಾಡುತ್ತಿದ್ದಾರೆ. ಕಬ್ಬಿಣ ಕಟ್ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.