ಹೊಸದಿಗಂತ ಡಿಜಿಟಲ್ ಡೆಸ್ಕ್
ಕನ್ನೆಪ್ಪಾಡಿ ಆಶ್ರಯ ಆಶ್ರಮದ ಸ್ಥಾಪಕಿ ನಿವೃತ್ತ ಅಧ್ಯಾಪಿಕೆ ದಿ.ಶಾರದಾ ಟೀಚರ್ ಅವರ 5ನೇ ಪುಣ್ಯತಿಥಿ ಕಾರ್ಯಕ್ರಮ ಜರಗಿತು. ಬೆಳಗ್ಗೆ ಆಶ್ರಮವಾಸಿಗಳು, ಅತಿಥಿಗಳು, ಹಿತಚಿಂತಕರು ಶಾರದಾ ಟೀಚರ್ ಅವರ ಸಮಾಧಿಗೆ ಪುಷ್ಪಾರ್ಚನೆಗೈದು ಪ್ರಾರ್ಥನೆಯನ್ನು ಸಲ್ಲಿಸಿದರು.
ನಂತರ ಆಶ್ರಮದಲ್ಲಿ ಜರಗಿದ ಸಂಸ್ಮರಣಾ ಸಭೆಯಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ಮಾಜಿ ನಿರ್ದೇಶಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಶ್ರೀಧರ ಸಾಗರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್ ಪಾಲ್ಗೊಂಡು ಮಾತನಾಡಿ ನಾವು ಉನ್ನತ ಸ್ಥಾನಕ್ಕೇರಬೇಕೆಂದು ಆಗ್ರಹಿಸುವ ವ್ಯಕ್ತಿಗಳಿದ್ದರೆ ಅದು ನಮ್ಮ ತಂದೆ ತಾಯಿಗಳು ಮಾತ್ರ. ಅಂತಹ ಹೆತ್ತವರನ್ನು ಸರಿಯಾಗಿ ನೋಡಿಕೊಂಡು ವೃದ್ಧಾಪ್ಯದಲ್ಲಿ ಅವರ ಆಗ್ರಹಗಳನ್ನು ಪೂರೈಸಬೇಕಾಗಿರುವುದು ಪ್ರತೀ ಮಕ್ಕಳ ಕರ್ತವ್ಯವಾಗಿದೆ ಎಂದರು.
ಶಾರದಾ ಟೀಚರ್ ಅವರ ನಿಕಟವರ್ತಿ, ರಾಷ್ಟ್ರಸೇವಿಕಾ ಸಂಘದ ಪ್ರಾಂತೀಯ ಪ್ರಮುಖರಾದ ಸುಮತಿ ಅಮ್ಮ ಸಂಸ್ಮರಣಾ ಭಾಷಣ ಮಾಡಿ ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು. ಶಾರದಾ ಟೀಚರ್ ಅವರ ಸಹೋದರ ರಮೇಶ್ ಶೆಣೈ ಮುಂಬೈ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ರಾಜೇಶ್ ಮಾಸ್ಟರ್ ಅಗಲ್ಪಾಡಿ ನಿರೂಪಿಸಿದರು. ಆಶ್ರಮದ ಜೊತೆಕಾರ್ಯದರ್ಶಿ ರಮೇಶ್ ಕಳೇರಿ ವಂದಿಸಿದರು.