ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುದುಚೇರಿಯಲ್ಲಿ ಪುರಾತನ ಹಿಂದೂ ದೇವತೆಗಳ ವಿಗ್ರಹಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಚೆನ್ನೈ ಪೊಲೀಸರ ತಂಡ ದಾಳಿ ನಡೆಸಿ, ಮೂರು ಪುರಾತನ ಹಿಂದೂ ದೇವತೆಗಳ ಲೋಹದ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರತಿಮೆಗಳನ್ನು ಪರಿಶೀಲಿಸಿದ ಪುರಾತತ್ವಶಾಸ್ತ್ರಜ್ಞರು 600 ವರ್ಷಗಳಷ್ಟು ಹಳೆಯ ಪ್ರತಿಮೆಗಳೆಂದು ಗುರುತಿಸಿದ್ದಾರೆ. ಈ ವಿಗ್ರಹಗಳು ಚೋಳ ಮತ್ತು ವಿಜಯನಗರ ಸಾಮ್ರಾಜ್ಯದ ರಾಜವಂಶಸ್ಥರ ಕಾಲದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ. ವಶಪಡಿಸಿಕೊಂಡ ಮೂರು ವಿಗ್ರಹಗಳನ್ನು ನಟರಾಜ, ವಿಂಧರ ಶಿವ ಮತ್ತು ವಿಷ್ಣು ಎಂದು ಗುರುತಿಸಲಾಗಿದೆ.
ಎಲ್ಲಾ ಮೂರು ಪ್ರತಿಮೆಗಳು ಹಿಂದೆ ಪುದುಚೇರಿಯ ದಿವಂಗತ ಜೋಸೆಫ್ ಕೊಲಂಬಾನಿಯವರ ಒಡೆತನದಲ್ಲಿದ್ದವು. 1980 ರ ಮೊದಲು, ಈ ವಿಗ್ರಹಗಳನ್ನು ತಮಿಳುನಾಡಿನ ವಿವಿಧ ಹಿಂದೂ ದೇವಾಲಯಗಳಿಂದ ಕಳವು ಮಾಡಲಾಗಿತ್ತು. ಈ ಪ್ರತಿಮೆಗಳು 23 ಕೆಜಿ ತೂಕ ಮತ್ತು ಸುಮಾರು ಎರಡೂವರೆ ಅಡಿ ಎತ್ತರವನ್ನು ಹೊಂದಿವೆ.
ಈ ಪೈಕಿ ನಟರಾಜ ಪ್ರತಿಮೆ 6 ಕೋಟಿ ರೂ., ಇನ್ನೆರಡು ಮೂರ್ತಿಗಳು ತಲಾ 3 ಕೋಟಿ ರೂ., ವಿಗ್ರಹಗಳ ಒಟ್ಟು ಮೌಲ್ಯ 12 ಕೋಟಿ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ. ಈ ವಿಗ್ರಹಗಳ ಮೂಲ ಮತ್ತು ಅವುಗಳಿಗೆ ಸಂಬಂಧಿಸಿದ ದೇವಾಲಯಗಳ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.