ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುದೀರ್ಘ 62 ದಿನಗಳ ಅಮರನಾಥ ಯಾತ್ರೆ ಗುರುವಾರ ಮುಕ್ತಾಯಗೊಂಡಿದ್ದು, ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಶಿವನ ದೇಗುಲಕ್ಕೆ ಈ ಬಾರಿ 4.70 ಲಕ್ಷ ಭಕ್ತರು ಯಾತ್ರೆ ಕೈಗೊಂಡಿದ್ದರು.
ಯಾತ್ರೆಯ ಕೊನೆ ದಿನದಂದು ಮಹಂತ್ ದೀಪೇಂದ್ರ ಗಿರಿ ಅವರು ಅಮರನಾಥ ಗುಹೆ ದೇವಾಲಯದಲ್ಲಿ ಪೂಜೆಯ ನೇತೃತ್ವ ವಹಿಸಿದ್ದರು.
ಅಮರನಾಥ ಗುಹೆಯಲ್ಲಿ ಸ್ವಾಭಾವಿಕವಾಗಿ ಮೂಡುವ ಹಿಮದ ಶಿವಲಿಂಗ ದರುಶನದ ವಾರ್ಷಿಕ ಯಾತ್ರೆ ಜುಲೈ 1ರಿಂದ ಆರಂಭವಾಗಿತ್ತು. ಯಾತ್ರೆಯು ಅನಂತ್ನಾಗ್ ಮತ್ತು ಗಂಡರ್ಬಾಲ್ ಜಿಲ್ಲೆಗಳ ಪಹಲ್ಗಾಮ್ ಮತ್ತು ಬಲ್ತಾಲ್ ಮಾರ್ಗಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಯಿತು.ಆಗಸ್ಟ್ 22 ರವರೆಗೆ 4.70 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಪ್ರತಿಕೂಲ ವಾತಾವರಣದಿಂದಾಗಿ ಆಗಸ್ಟ್ 22 ರ ನಂತರ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ವಿವಿಧ ಆರೋಗ್ಯ ಕಾರಣಗಳಿಂದಾಗಿ 46 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದರೆ, ಕಳೆದ ವರ್ಷ 71 ಮಂದಿ ಮೃತಪಟ್ಟಿದ್ದರು.