ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಕಮಲಾಪುರ ತಾಲೂಕಿನ ಹೊರವಲಯದಲ್ಲಿ ಖಾಸಗಿ ಸ್ಲೀಪರ್ ಬಸ್ ಹಾಗೂ ಗೂಡ್ಸ್ ಲಾರಿ ನಡುವೆ ಭೀಕರ ಅಪಘಾತ ಉಂಟಾಗಿದೆ. ಡಿಕ್ಕಿಯಾದ ರಭಸಕ್ಕೆ ಬಸ್ ಹೊತ್ತು ಉರಿದ ಪರಿಣಾಮ ಎಂಟಕ್ಕೂ ಹೆಚ್ಚು ಜನರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.
ಬೀದರ್ – ಶ್ರೀರಂಗಪಟ್ಟಣ ಹೆದ್ದಾರಿ ಕಮಲಾಪುರ ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ. ಗೋವಾ ಮೂಲದ ಆರೆಂಜ್ ಕಂಪನಿಗೆ ಸೇರಿದ ಸ್ಲೀಪರ್ ಬಸ್ ಎನ್ನಲಾಗಿದೆ, ಬೆಳಗ್ಗೆ 6-30 ರ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಹೆಚ್ಚಾದ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಚಾಲಕ ಸೇರಿದಂತೆ ಬಸ್ನಲ್ಲಿ ಸುಮಾರು 35 ಜನರಿದ್ದರು ಎನ್ನಲಾಗಿದೆ. 12 ಜನರನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸುಮಾರು 8 ಕ್ಕೂ ಅಧಿಕ ಜನರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಆರೇಂಜ್ ಟೂರ್ಸ್ ಆಂಡ್ ಟ್ರಾವೆಲ್ಸ್ಗೆ ಸೇರಿದ ಬಸ್, ಗೋವಾದಿಂದ ಹೈದ್ರಾಬಾದ್ಗೆ ತೆರಳುತ್ತಿತ್ತು. ಮುಖಾಮುಖಿ ಡಿಕ್ಕಿ ನಂತರ ಬಸ್ ಪಕ್ಕದ ಬ್ರಿಡ್ಜ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.