ಹೊಸ ದಿಗಂತ ವರದಿ, ಹಾವೇರಿ:
ಹಾವೇರಿಯಲ್ಲಿ ಜರಗುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ಮುಖ್ಯ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆ ಸಿದ್ಧತಾ ಕಾರ್ಯವೂ ಅರ್ಧಕ್ಕೂ ಹೆಚ್ಚು ಭಾಗ ಸಿದ್ಧವಾಗಿದ್ದು , ನಾಳೆಯ ಒಳಗಾಗಿ ಪೂರ್ಣಗೊಳ್ಳುವ ಹಂತಕ್ಕೆ ಬರಲಿದೆ.
ಯಾವುದೇ ಸಮ್ಮೇಳದಲ್ಲಿ ಪ್ರಮುಖವಾಗಿ ಮೂಲಭೂತ ಸೌಲಭ್ಯಗಳು, ಊಟೋಪಚಾರದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಹಾರ ಸಮಿತಿ ಅಧ್ಯಕ್ಷ ಜಿ.ಪಂ. ಸಿಇಓ ಮಹಮ್ಮದ ರೋಷನ್ ಸ್ವತಃ ಕಾಳಜಿ ವಹಿಸಿ ಎಲ್ಲ ಸಿದ್ಧತೆಗಳನ್ನು ಮಾಡುವುದಕ್ಕೆ ಟೊಂಕಕಟ್ಟಿ ನಿಂತಿರುವುದು ಕಂಡುಬರುತ್ತಿದೆ.
ನಗರದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವಿದ್ಯುತ್ ದೀಪಾಲಂಕರ ಮಾಡಲಾಗುತ್ತಿದೆ. ಮೆರವಣಿಗೆ ಸಾಗಿಬರುವ ಮಾರ್ಗದ ರಸ್ತೆ ಸೇರಿದಂತೆ ಕೆಲ ಪ್ರಮುಖ ರಸ್ತೆಗಳಲ್ಲಿ ಇಗಾಗಲೇ ವಿದ್ಯುತ್ ದೀಪಗಳನ್ನು ಕಮಾನಿನಾಕಾರದಲ್ಲಿ ಅಳವಡಿಸಿ ಬೆಳಗಿಸಲಾಗಿದೆ. ರಸ್ತೆಗಳ ಪಕ್ಕದಲ್ಲಿರುವ ಪ್ರತಿ ಮರಕ್ಕೂ ಲೈಟಿನ ಸರಗಳನ್ನು ಅಳವಡಿಸಿ ಬೆಳಗಿಸಿರುವುದರಿಂದ ರಸ್ತೆಗಳು ಬೆಳಕಿನಿಂದ ಝಗಮಗಿಸುತ್ತಿದೆ.
ಶೇಂಗಾ ಹೋಳಿಗೆ 1.5 ಲಕ್ಷ, ರವೆ ಉಚಿಡಿ 1.2 ಲಕ್ಷ, 1.5 ಲಕ್ಷ ಮೈಸೂರ ಪಾಕ್, 1.6 ಲಡಕಿ ಪಾಕ್ ಇಗಾಗಲೇ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಮಂಗಳವಾರ ರಾತ್ರಿ ಮೋತಿ ಚೂರ ಸಿದ್ಧ ಪಡಿಸಲಾಗುವುದು. ಕಳೆದ ಐದು ದಿನಗಳಿಂದ ಹೋಳಿಗೆ ತಯಾರಿಕೆ ನಡೆಯುತ್ತಿದೆ. ಉಳಿದ ಎಲ್ಲ ಸಿಹಿ ಪದಾರ್ಥಗಳನ್ನು ಇಲ್ಲಿನೆ ಸಿದ್ಧ ಪಡಿಸಿಕೊಳ್ಳಲಾಗುತ್ತಿದೆ ಎಂದು ಆಹಾರ ತಯಾರಿಕೆ ಉಸ್ತುವಾರಿ ಜೀವನರಾಜ ಹೇಳಿದ್ದಾರೆ.