ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬೆಜೆಟ್ ನಲ್ಲಿ ಕರ್ನಾಟಕದ (Karnataka) ರೈಲ್ವೇ ಯೋಜನೆಗಳಿಗಾಗಿ (Indian Railway) ಅತ್ಯಧಿಕ ಹಣವನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ತಿಳಿಸಿದ್ದಾರೆ.
ಒಟ್ಟು 7561 ಕೋಟಿ ರೂ. ಮೀಸಲಿಡಲಾಗಿದೆ. ಇದು ಈ ಹಿಂದೆ ನೀಡುತ್ತಿದ್ದ ಮೊತ್ತಕ್ಕೆ ಹೋಲಿಸಿದರೆ, 9 ಪಟ್ಟು ಹೆಚ್ಚು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈಲ್ವೆಗೆ ಬಜೆಟ್ನಲ್ಲಿ ನೀಡಿದ ಅನುದಾನ ಕುರಿತು ಮಾಹಿತಿ ನೀಡಿದ ಸಚಿವ ಅಶ್ವಿನ್ ವೈಷ್ಣವ್ ಅವರು, ಕರ್ನಾಟಕಕ್ಕೆ ಈ ಬಾರಿ ಸಿಕ್ಕಾಪಟ್ಟೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 7561 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಹಣವನ್ನು ಈ ಹಿಂದೆ ಯಾವತ್ತೂ ನೀಡಿಲ್ಲ. 2009ರಿಂದ 2014ರವರೆಗೆ ಕರ್ನಾಟಕಕ್ಕೆ ಪ್ರತಿ ವರ್ಷ ಹೆಚ್ಚು 850 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಈ ಬಾರಿ 9 ಪಟ್ಟು ಹೆಚ್ಚಳ ಅನುದಾನ ಒದಗಿಸಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬ್ಲೂಪ್ರಿಂಟ್ ದೇಶಕ್ಕೆ ಮಾದರಿಯಾಗಿದೆ. ದೇಶದ ಇತರ ಕಡೆಗೂ ಬಳಸಿಕೊಳ್ಳಲಾಗುವುದು. ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಸೇರಿ ಎಲ್ಲ ಹಂತಗಳಲ್ಲಿ ರಾಜ್ಯ ಸರ್ಕಾರ ನೆರವು ನೀಡುತ್ತಿದೆ ಎಂದು ಕರ್ನಾಟಕ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು.
ರೈಲುಗಳಲ್ಲಿ ಸ್ಥಳೀಯ ಆಹಾರವನ್ನು ನೀಡಲು ನಿರ್ಧಾರ ಮಾಡಲಾಗಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ರೈಲುಗಳ ಹಳೆ ಕೋಚ್ಗಳನ್ನು ಬದಲಾಯಿಸಲಾಗುತ್ತಿದೆ. ಜತೆಗೆ, ಮುಂದಿನ ದಿನಗಳಲ್ಲಿ ಒಂದೇ ಮೆಟ್ರೋ ಯೋಜನೆಗೆ ನಿರ್ಧರಿಸಲಾಗಿದೆ. ರೈಲು ಮಾರ್ಗಗಳ ಮೂಲಕ ನೂರು ಕಿಲೋಮೀಟರ್ ಅಂತರದಲ್ಲಿರುವ ಎರಡು ದೊಡ್ಡ ನಗರಗಳಿಗೆ ಸಂಪರ್ಕ ಕಲ್ಪಿಸುವ ಚಿಂತನೆ ಇದೆ. ಹೈಡ್ರೋಜನ್ ರೈಲು ಈ ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.