ಹೊಸದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯಲ್ಲಿ ಸಂಸದ ಜಿ.ಎಸ್. ಬಸವರಾಜು ಮತ್ತು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು ಅವರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರ ಬಗೆಗಿನ ಪಿಸುಮಾತು ಬಹಿರಂಗವಾಗಿ ದೊಡ್ಡ ಕಂಪನ ಎಬ್ಬಿಸಿದೆ.
ಇಂದು ಬೆಳಗ್ಗೆ ನಗರಾಭಿವೃದ್ದಿ ಸಚಿವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೈಕ್ ಆಫ್ ಮಾಡದೆ ಮಾತನಾಡಿದ ರಾಜಕೀಯ ನಾಯಕರು ಈ ರೀತಿ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಈ ವೇಳೆ ಸಚಿವರ ಕಿವಿಕಚ್ಚಿದ ಸಂಸದರು, ದಕ್ಷಿಣ ಕೊರಿಯಾದಲ್ಲಿ ಕಿಂಗ್ ಪಿನ್ ನಂತೆ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರು ಎಂದು ಜಿಲ್ಲೆಯ ಉಸ್ತುವಾರಿ ಸಚಿವರನ್ನು ಕಿಂಗ್ ಪಿನ್ ಗೆ ಹೋಲಿಸಿ, ಏಕವಚನದಲ್ಲಿಯೇ ಸಂಭೋದಿಸಿ ಮಾತನಾಡಿದ್ದಾರೆ. ಇವನು ಜಿಲ್ಲೆಯನ್ನು ಹಾಳುಮಾಡಿ ಬಿಟ್ಟಿದ್ದಾನೆ, ಅಧಿಕಾರಿಗಳನ್ನು ಏಕವಚನದಲ್ಲಿಯೇ ಬಯ್ಯುತ್ತಾನೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರು ತಮ್ಮ ಆರೋಗ್ಯ ಸರಿಯಿಲ್ಲ ಎಂದರೂ ಸಹ ನೀನು ನಿನ್ನ ಹೆಂಡತಿಯ ಸೀರೆ ಒಗೆಯಲಷ್ಟೇ ಲಾಯಕ್ಕು ಎಂದು ಜಿಲ್ಲಾಪಂಚಾಯತ್ ಸಭೆಯಲ್ಲಿ ಎಲ್ಲರ ಮುಂದು ಹೇಳಿ ಅವರನ್ನು ನಿಂದಿಸುತ್ತಾನೆ.
ಇವನಿಗೆ ಯಾರ ಬಗ್ಗೆಯೂ ಗೌರವವಿಲ್ಲ ಸರ್ವಾಧಿಕಾರಿ ಆಗಿದ್ದಾನೆ. ಇವನಿಂದಾಗಿ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹೊಡೆತ ಬೀಳಲಿದೆ ಎಂದು ದೂರಿದರು.