ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಭಗತ್ ಸಿಂಗ್ ಹನಿ ಅವರನ್ನು ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಭೂಪಿಂದರ್ನ್ನು ಬಂಧಿಸಿದ್ದಾರೆ.
ಫೆ.20 ರಂದು ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ರಾಜಕೀಯ ವಲಯದಲ್ಲಿ ಇದು ಭಾರೀ ಸುದ್ದಿಯಾಗಿದೆ. ಒಬೇದ್ ಮೈನಿಂಗ್ ಪ್ರಕರಣದಲ್ಲಿ ಇಡಿ ಭೂಪಿಂದರ್ ಸಿಂಗ್ ಹನಿ ಅವರ ಮನೆ, ಕಚೇರಿ ಸೇರಿ ಹಲವು ಕಡೆ ಎರಡು ದಿನಗಳ ಕಾಲ ದಾಳಿ ನಡೆಸಿತ್ತು.
ಜತೆಗೆ ಪಿಂಜೋರ್ ರಾಯಲ್ಟಿ ಕಂಪನಿಯ ಮಾಲೀಕ ಕುದ್ರತ್ದೀಪ್ ಸಿಂಗ್ ಅವರ ಪಾಲುದಾರರು ಮತ್ತು ಷೇರುದಾರರಾದ ಕನ್ವರ್ಮಹಿಪ್ ಸಿಂಗ್, ಮನ್ಪ್ರೀತ್ ಸಿಂಗ್, ಸುನೀಲ್ ಕುಮಾರ್ ಜೋಶಿ, ಜಗ್ವೀರ್ ಇಂದರ್ ಸಿಂಗ್ ಸೇರಿದಂತೆ ಆರೋಪಿಗಳು ಮತ್ತು ಅವರ ಸಹಚರರ ಮೇಲೆ ಇಡಿ ದಾಳಿ ನಡೆಸಲಾಗಿದೆ. ಈ ವೇಳೆ ಕೋಟ್ಯಂತರ ರೂಪಾಯಿ ನಗದು, ಚಿನ್ನ ಹಾಗೂ ದುಬಾರಿ ಬೆಲೆಯ ವಾಚ್ ವಶಪಡಿಸಿಕೊಳ್ಳಲಾಗಿತ್ತು.