ಹೊಸದಿಗಂತ ವರದಿ, ಮಡಿಕೇರಿ:
ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಬೆಲೆಬಾಳುವ ಹರಳುಕಲ್ಲನ್ನು ಲೂಟಿ ಮಾಡುತ್ತಿರುವ ದಂಧಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮಡಿಕೇರಿ ಸಮೀಪದ ಮೇಕೇರಿಯ ನಿವಾಸಿ, ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಸಲೀಂ ಎಂಬಾತನೇ ಬಂಧಿತ ಆರೋಪಿ.
ಮಡಿಕೇರಿ ತಾಲೂಕಿನ ಭಾಗಮಂಡಲ ವಲಯದ ತೋಡಿಕಾನ ಉಪವಲಯದ ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದ ನಿಶಾನೆ ಮೊಟ್ಟೆಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಜಾಲವನ್ನು ಬೆನ್ನು ಹತ್ತಿದ ಅರಣ್ಯ ಇಲಾಖೆಯ ತನಿಖಾ ತಂಡ,ಗ್ರಾಹಕರ ಸೋಗಿನಲ್ಲಿ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಆತನಿಂದ 2.600 ಕೆ.ಜಿ ಹರಳು ಕಲ್ಲನ್ನು ವಶಕ್ಕೆ ಪಡೆಯಲಾಗಿದ್ದು, ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ಸಲೀಂ ಈ ಹಿಂದೆಯೂ ಬಂಧಿತನಾಗಿದ್ದು, ಆತನಿಂದ 3 ಕೆಜಿ ಹರಳು ಕಲ್ಲನ್ನು ವಶಕ್ಕೆ ಪಡೆಯಲಾಗಿತ್ತೆನ್ನಲಾಗಿದೆ. ಆದರೆ ಅರಣ್ಯ ಇಲಾಖೆ ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಎರಡು ವರ್ಷದ ಬಳಿಕ ಆತ ಮತ್ತೆ ಸಿಕ್ಕಿಬಿದ್ದಿದ್ದಾನೆ.