ಹೊಸದಿಗಂತ ವರದಿ,ಚಿತ್ರದುರ್ಗ
ಒಂದು ಕಾಲೇಜಿನಿಂದ ಆರಂಭವಾದ ಹಿಜಾಬ್ ವಿವಾದ ಇದೀಗ ರಾಜ್ಯವನ್ನೇ ಆವರಿಸಿದೆ. ಹಿಜಾಬ್ ನಮ್ಮ ಹಕ್ಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದರೆ, ಈ ಬಗ್ಗೆ ನಿನ್ನೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ತೀರ್ಪಿಗಾಗಿ ರಾಜ್ಯವೇ ಕಾದು ಕುಳಿತಿದೆ.
ಚಿತ್ರದುರ್ಗದಲ್ಲಿ ಸರ್ಕಾರಿ ಬಾಲಕಿಯರ ಕಾಲೇಜು ಬಳಿ ಹಿಜಾಬ್ ಗಲಾಟೆ ಜೋರಾಗಿದ್ದು, ವಿದ್ಯಾರ್ಥಿನಿಯರು ತರಗತಿಯಿಂದ ಹೊರಗೆ ಕುಳಿತು ಪ್ರತಿಭಟಿಸುತ್ತಿದ್ದಾರೆ. ಹಿಜಾಬ್ ತೆಗೆಸಿದರೆ ನಮಗೆ ಶಿಕ್ಷಣವೇ ಬೇಡ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಬುರ್ಖಾ, ಹಿಜಾಬ್ ನಮಗೆ ಸುರಕ್ಷತೆ ಅದನ್ನು ತೆಗೆಯುವುದಿಲ್ಲ ಎಂದಿದ್ದಾರೆ. ತರಗತಿಗಳಿಗೆ ಹಾಜರಾಗದೆ ಶಾಲಾ ಕಾಲೇಜುಗಳ ಹೊರಗೆ ಕುಳಿತಿದ್ದಾರೆ.
ಶಾಲಾ ಕಾಲೇಜುಗಳ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಇಷ್ಟು ದಿನ ಶಾಂತವಾಗಿದ್ದ ಚಿತ್ರದುರ್ಗದಲ್ಲೂ ಇದೀಗ ಹಿಜಾಬ್ ಗಲಾಟೆ ಆರಂಭವಾಗಿದೆ. ಕೊರೋನಾದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಈಗಾಗಲೇ ತೊಂದರೆಯಾಗಿದೆ. ಸರಿಯಾಗಿ ತರಗತಿಗಳು ನಡೆದಿಲ್ಲ. ಶೈಕ್ಷಣಿಕ ವರ್ಷ ಮುಗಿಯುವ ಸಮಯ ಬೇರೆ ಹತ್ತಿರವಿದೆ. ಈ ಮಧ್ಯೆ ಹಿಜಾಬ್ ವಿವಾದ ರಾಜ್ಯದಲ್ಲಿ ಜೋರಾಗಿಯೇ ಭುಗಿಲೆದ್ದಿದೆ. ನಿನ್ನೆಯಷ್ಟೇ ಕಾಲೇಜುಗಳು ಪುನರಾರಂಭಗೊಂಡಿವೆ. ಈ ಮಧ್ಯೆ ಅಲ್ಲಲ್ಲಿ ಹಿಜಾಬ್ ಬಗ್ಗೆ ಗೊಂದಲ, ಮಾತಿನ ಚಕಮಕಿ ನಡೆಯುತ್ತಲೇ ಇದೆ.
ಹಿಜಾಬ್ ಧರಸಿ ಬಂದ ವಿಧ್ಯಾರ್ಥಿನಿಯರ ಪರ ಆಗಮಿಸಿದ್ದ ಮುಸ್ಲಿಂ ಸಮುದಾಯದವರಿಗೆ ಕಾಲೇಜಿನ ಪ್ರಾಂಶುಪಾಲರು ಹೈಕೋರ್ಟ್ ಮತ್ತು ಇಲಾಖೆಯ ಆದೇಶವನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಆದೇಶದಂತೆ ಹಿಜಾಬ್ ತೆಗೆದು ತರಗತಿಗಳಿಗೆ ಕಳಿಸುವಂತೆ ತಿಳುವಳಿಕೆ ನೀಡಿದರು. ಆದರೆ ಇದರಿಂದ ಪ್ರಯೋಜನವಾಗಲಿಲ್ಲ.