ಯುವನಾಯಕರಿಗೆ ಕೆ.ಸಿ.ರೆಡ್ಡಿಯವರ ಬದುಕು ಮಾರ್ಗದರ್ಶಕ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಇಂದಿನ ಯುವನಾಯಕರಿಗೆ ಕೆ.ಸಿ.ರೆಡ್ಡಿಯವರ ಬದುಕು ಮಾರ್ಗದರ್ಶಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆರಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿಯವರು ದೂರದೃಷ್ಟಿಯಿರುವ ಹಿರಿಯ ನಾಯಕರು. ಕೆ.ಸಿ.ರೆಡ್ಡಿಯವರು ಹಾಕಿರುವ ಆಡಳಿತದ ಅಡಿಪಾಯದಿಂದ ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು. ಉತ್ತಮ ಆಡಳಿತಗಾರರಾದ ಕೆ.ಸಿ.ರೆಡ್ಡಿಯವರ ಆದರ್ಶಗಳು, ತತ್ವಗಳು, ಸಾರ್ವಜನಿಕ ಬದುಕಿನ ರೀತಿ, ಜನರ ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸುವ ಬಗೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ಆಡಳಿತಾವಧಿಯಲ್ಲಿ ಪ್ರಾದೇಶಿಕ, ಸಾಮಾಜಿಕ ಅಸಮತೋಲನ ನಿವಾರಣೆಗೆ ಆದ್ಯತೆ ನೀಡಲಾಗುತ್ತಿತ್ತು ಎಂದು ತಿಳಿಸಿದರು.

ಕೆ.ಸಿ.ರೆಡ್ಡಿಯವರ ಜೀವನಾದರ್ಶಗಳು ಪ್ರೇರಣಾದಾಯಕ:
ಕೋಲಾರ ಜಿಲ್ಲೆಯ ಕೆ.ಸಿ.ರೆಡ್ಡಿಯವರು ವೈಜ್ಞಾನಿಕ ಚಿಂತನೆಯ ವ್ಯಕ್ತಿ. ಕರ್ನಾಟಕ ರಾಜ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಸ್ವಾಮ್ಯದ ಬಿಎಚ್ಇಎಲ್, ಬಿಎಂಎಲ್, ಎಚ್ಎಎಲ್ ಸೇರಿದಂತೆ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಲು ಕಾರಣರಾದರು. ಹೊಸ ತಂತ್ರಜ್ಞಾನದಿಂದ ಹೊಸ ಚಿಂತನೆಗೆ ನಾಂದಿ ಹಾಡಿದ್ದರು. ಇದರಿಂದಾಗಿ ನಮ್ಮ ರಾಜ್ಯ ಐಟಿಬಿಟಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಹಕಾರಿಯಾಯಿತು. ಅಂದಿನ ಉದ್ಯಮಗಳಲ್ಲಿದ್ದ ಆರ್ ಆ್ಯಂಡ್ ಡಿ, ರಾಜ್ಯದಲ್ಲಿ ಇಂದಿನ ತಂತ್ರಜ್ಞಾನದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದೆ. ಸದಾ ಸ್ಮರಣೀಯರಾದ ಕೆ.ಸಿ.ರೆಡ್ಡಿಯವರ ಜೀವನಾದರ್ಶಗಳು ಸದಾಕಾಲ ಪ್ರೇರಣಾದಾಯಕ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಪ್ರತಿಮೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕೆ.ಸಿ.ರೆಡ್ಡಿಯವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!