ಹೊಸದಿಗಂತ ವರದಿ, ಮಡಿಕೇರಿ:
ಇಲ್ಲಿಗೆ ಸಮೀಪದ ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸುಮಾರು 2.50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿದೆ. ಆ ನಿಟ್ಟಿನಲ್ಲಿ ಕೃಷಿಕರು, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.
ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಹೀಗೆ ಹತ್ತು ಹಲವು ಮೂಲ ಸೌಲಭ್ಯಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಿದೆ. ಗ್ರಾಮೀಣ ಪ್ರದೇಶ ಅಭಿವೃದ್ಧಿ ಆದಲ್ಲಿ ರಾಷ್ಟ್ರದ ಅಭಿವೃದ್ಧಿ ಎಂಬುದನ್ನು ಮರೆಯುವಂತಿಲ್ಲ ಎಂದರು.
ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಿಜಿಟಲ್ ಗ್ರಂಥಾಲಯವನ್ನು ಶಾಸಕರು ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಉದ್ಘಾಟಿಸಿದರು.
ಬಳಿಕ ಮದೆನಾಡು ವ್ಯಾಪ್ತಿಯಲ್ಲಿ 9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಲೋನಿಗೆ ಸೇರಿದ ರಸ್ತೆಯ ಭೂಮಿ ಪೂಜೆ ಹಾಗೂ 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಮದೆ ಸಾಲಾಪು ಗ್ರಾಮದ ರಸ್ತೆ ಮತ್ತು ಸೇತುವೆಯ ಉದ್ಘಾಟಿನೆ ನೆರವೇರಿಸಿದರು.
ರೂ.3 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಟ್ಟಡ ಕುಟುಂಬಕ್ಕೆ ಸೇರಿದ ರಸ್ತೆ ಮತ್ತು ಮದೆ ಮಾದೂರಪ್ಪ ದೇವಸ್ಥಾನ ರಸ್ತೆಯ 4 ಲಕ್ಷ ವೆಚ್ಚದ ಕಾಮಗಾರಿ, ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಹುಲಿಮನೆ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.
ಮದೆನಾಡು ಪಂಚಾಯಿತಿಗೆ ಸಂಬಂಧಿಸಿದಂತೆ ಅಂದಾಜು 2.50 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ಈ ಸಂದರ್ಭ ನೆರವೇರಿಸಲಾಯಿತು.
ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ಮದೆನಾಡು ಪಂಚಾಯಿತಿಯ ಅಧ್ಯಕ್ಷೆ ಚೆರಿಯಮನೆ ಚಂದ್ರಾವತಿ, ಉಪಾಧ್ಯಕ್ಷೆ ಪಿ.ಎ.ಚಂದ್ರಾವತಿ, ಪ್ರಮುಖರಾದ ಧನಂಜಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್, ಶಕ್ತಿ ಕೇಂದ್ರದ ಪ್ರಮುಖರಾದ ಬೆಳ್ಯನ ರವಿ, ಕಾರ್ಯಕರ್ತರಾದ ತನು, ಸುರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಂಜುಂಡಸ್ವಾಮಿ ಇದ್ದರು