ಹೊಸದಿಗಂತ ವರದಿ, ಮಡಿಕೇರಿ:
ಉಕ್ರೇನ್’ನಲ್ಲಿ ಸಿಲುಕಿದ್ದ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ವಿದ್ಯಾರ್ಥಿನಿ ಅಕ್ಷಿತಾ ಅಕ್ಕಮ್ಮ ಸುರಕ್ಷಿತವಾಗಿ ಭಾನುವಾರ ಮನೆ ಸೇರಿದರು.
ಕೂಡಿಗೆಯ ಸಮೀಪದ ಮಲ್ಲೇನಹಳ್ಳಿ ಗ್ರಾಮದ ನಿವಾಸಿ ಐಮುಡಿಯಂಡ ರಮೇಶ್ ಎಂಬವರ ಪುತ್ರಿ ಅಕ್ಷಿತಾ ಅಕ್ಕಮ್ಮ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು.
ಸುರಕ್ಷಿತವಾಗಿ ಮನೆಗೆ ತಲುಪಿದ್ದಕ್ಕೆ ಸಹಕಾರ ಮಾಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಅಕ್ಷಿತಾ, ಖಾರ್ಕಿವ್’ನಲ್ಲಿ ಘಟಿಸಿದ ಅನಿರೀಕ್ಷಿತ ಬೆಳವಣಿಗೆಗಳು ಹಾಗೂ ಅಲ್ಲಿಂದ ಭಾರತಕ್ಕೆ ತಲುಪಲು ಮಾಡಿದ ಸಾಹಸದ ಬಗ್ಗೆ ವಿವರಿಸಿದರು.
ಇಂತಹ ವಿಷಮ ಪರಿಸ್ಥಿಯಲ್ಲೂ ಕೂಡ ಭಾರತೀಯರ ಸಂರಕ್ಷಣೆಗೆ ಕೇಂದ್ರ, ರಾಜ್ಯ ಸರಕಾರದ ತೋರಿದ ದಿಟ್ಟ ನಡೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಆಗಿಂದಾಗ್ಗೆ ಕರೆ ಮಾಡಿ ಧೈರ್ಯ ತುಂಬಿಸಿದ ಕೊಡಗು ಜಿಲ್ಲಾ ಎಸ್ಪಿ, ವಿಪತ್ತು ನಿರ್ವಹಣಾ ಘಟಕ ನೀಡಿದ ಅಭಯಕ್ಕೆ ಅವರು ಧನ್ಯವಾದ ಸಲ್ಲಿಸಿದರು.
ಮನೆಗೆ ಆಗಮಿಸಿದ ಮಗಳನ್ನು ಪೋಷಕರು ಆರತಿ ಬೆಳಗಿ ಹೂಗುಚ್ಛ ನೀಡಿ ಬರಮಾಡಿಕೊಂಡು ಸಿಹಿ ತಿನಿಸಿ ಸಂಭ್ರಮಿಸಿದರು.