ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಸುಮಾರು 2,105 ವಲಸಿಗರು ಕಾಶ್ಮೀರ ಕಣಿವೆಗೆ ಮರಳಿದ್ದಾರೆ. ಅಲ್ಲದೇ ಪ್ರಧಾನಿ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಒದಗಿಸಲಾದ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ.
2019ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರ ಸರಕಾರದಿಂದ ಕಾಶ್ಮೀರಿ ಕಣಿವೆಯಲ್ಲಿ ಪುನರ್ವಸತಿ ಪಡೆದ ಕಾಶ್ಮೀರಿ ಪಂಡಿತರ ಮಾಹಿತಿಯನ್ನು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ. 2020-21ರಲ್ಲಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಒಟ್ಟು 841 ನೇಮಕಾತಿಗಳನ್ನು ಮಾಡಲಾಗಿದೆ. 2021-2022ರಲ್ಲಿ 1,264 ನೇಮಕಾತಿಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 2019ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಜೊತೆಗೆ ಹಿಂದುಗಳ ಹತ್ಯೆಯ ಕುರಿತು ರಾಯ್, 2019 ಆಗಸ್ಟ್ 5ರಿಂದ ಈ ವರ್ಷ ಮಾರ್ಚ್ 24ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 4 ಕಾಶ್ಮೀರಿ ಪಂಡಿತರು ಮತ್ತು 10 ಇತರ ಹಿಂದುಗಳು ಸೇರಿದಂತೆ ಒಟ್ಟು 14 ಜನರನ್ನು ಭಯೋತ್ಪಾದಕರು ಕೊಂದಿದ್ದಾರೆ. 2019 ಆಗಸ್ಟ್ 5 ಮತ್ತು 2019 ಡಿಸೆಂಬರ್ 31ರ ನಡುವೆ ಮೂವರು ಹಿಂದುಗಳ ಹತ್ಯೆಯಾಗಿದೆ; 2020ರಲ್ಲಿ ಒಬ್ಬ ಕಾಶ್ಮೀರಿ ಪಂಡಿತ ಸೇರಿದಂತೆ ಇಬ್ಬರು; 2021ರಲ್ಲಿ ಮೂವರು ಕಾಶ್ಮೀರಿ ಪಂಡಿತರು ಮತ್ತು ಇತರ ಆರು ಹಿಂದುಗಳ ಸಹಿತ ಒಟ್ಟು 9 ಜನರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ವರ್ಷ ಮಾರ್ಚ್ 24 ರವರೆಗೆ ಕಾಶ್ಮೀರ ಕಣಿವೆಯಲ್ಲಿ ನಡೆದ ಯಾವುದೇ ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರಿ ಪಂಡಿತರಾಗಲಿ, ಇತರ ಹಿಂದೂಗಳಾಗಲಿ ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ.
ಕಣಿವೆ ರಾಜ್ಯದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಗೆ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಭಯೋತ್ಪಾದಕರ ವಿರುದ್ಧ ಪೂರ್ವಭಾವಿ ಕಾರ್ಯಾಚರಣೆಗಳ ಜೊತೆಗೆದೃಢವಾದ ಭದ್ರತೆ ಮತ್ತು ಗುಪ್ತಚರ ಗ್ರಿಡ್, ಸ್ಟ್ಯಾಟಿಕ್ ಗಾರ್ಡ್ ರೂಪದಲ್ಲಿ ಗುಂಪು ಭದ್ರತೆ, ಹಗಲು ರಾತ್ರಿ ಪ್ರದೇಶದ ಮೇಲೆ ಕಣ್ಗಾವಲು, ಎಲ್ಲ ಚೆಕ್ ಪೋಸ್ಟ್ಗಳಲ್ಲಿ 24 ತಾಸು ತಪಾಸಣೆ ಇತ್ಯಾದಿ ಸೇರಿದೆ ಎಂದು ರಾಯ್ ವಿವರಿಸಿದ್ದಾರೆ.