ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ಪರಿಷತ್ ಚುನಾವಣೆಯಲ್ಲೂ ಗೆದ್ದು ಬೀಗಿದೆ.
36 ಸ್ಥಾನಗಳ ಪೈಕಿ ಬಿಜೆಪಿ 33ರಲ್ಲಿ ಗೆಲುವು ಪಡೆದಿದೆ. ಪ್ರತಿಪಕ್ಷ ಎಸ್ಪಿ ಯಾವುದೇ ಸ್ಥಾನಗಳಲ್ಲೂ ಗೆಲುವು ಸಾಧಿಸದೆ ಮುಖಭಂಗ ಅನುಭವಿಸಿದೆ.
36 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದಂತೆ ಚುನಾವಣೆ ಸಂದರ್ಭದಲ್ಲಿ ಬುದೌನ್, ಹರ್ದೋಯ್, ಖೇರಿ, ಮಿರ್ಜಾಪುರ್-ಸೋನ್ಭದ್ರ, ಬಂದಾ-ಹಮೀರ್ಪುರ್, ಅಲಿಗಢ್, ಬುಲಂದ್ಶಹರ್ನಲ್ಲಿ ಗೆಲುವಿನ ನಗೆ ಬೀರಿದೆ.
100 ಪರಿಷತ್ ಸದಸ್ಯರ ಪೈಕಿ ಬಿಜೆಪಿ 35 ಸ್ಥಾನ ಪಡೆದುಕೊಂಡಿತ್ತು. ಇದೀಗ ಅದರ ಸ್ಥಾನ 44ಕ್ಕೆ ಏರಿಕೆಯಾಗಿದೆ. ಆದರೆ, ಬಹುಮತಕ್ಕೆ ಏಳು ಸ್ಥಾನ ಕಡಿಮೆ ಇದೆ. ಸಮಾಜವಾದಿ ಪಕ್ಷ 17 ಸದಸ್ಯರನ್ನು ಹೊಂದಿದ್ದು, ಬಿಎಸ್ಪಿ ನಾಲ್ಕು, ಕಾಂಗ್ರೆಸ್ ಮತ್ತು ಬಿಜೆಪಿ ಮಿತ್ರಪಕ್ಷಗಳಾದ ಅಪ್ನಾದಳ, ನಿಶಾದ್ ಪಕ್ಷ ತಲಾ ಓರ್ವ ಸದಸ್ಯರನ್ನ ಹೊಂದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ, ಉತ್ತರ ಪ್ರದೇಶ ಜನರು ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿ. ನಮ್ಮ ಪಕ್ಷ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲೂ ಭರ್ಜರಿ ಗೆಲುವು ದಾಖಲು ಮಾಡಿದ್ದು, ಇದೀಗ ರಾಜ್ಯದ ಜನರ ಕಲ್ಯಾಣ, ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಹಕಾರಿಯಾಗಿದೆ ಎಂದಿದ್ದಾರೆ.
ಎಂಎಲ್ಸಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಈ ಗೆಲುವು ಬಿಜೆಪಿ ಅಭಿವೃದ್ಧಿಗೆ ಪೂರಕವಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಹಾಗೂ ಪಕ್ಷ ಸಂಘಟನೆಯಲ್ಲಿ ಭಾಗಿಯಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದಿದ್ದಾರೆ.