ಹೊಸದಿಗಂತ ಡಿಜಿಟಲ್ ಡೆಸ್ಕ್
ಶ್ರೀರಾಮನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಪಂಜಾಬಿನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯನ್ನು ಕಾಲೇಜು ಆಡಳಿತ ಮಂಡಳಿಯು ವಜಾ ಮಾಡಿದೆ.
ಸಹಾಯಕ ಪ್ರೊಫೆಸರ್ ಗುರ್ಸಾಂಗ್ ಪ್ರೀತ್ ಕೌರ್ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ವಿರುದ್ಧ ಕೀಳು ಅಭಿರುಚಿಯ ಪದಗಳನ್ನು ಬಳಸಿ ನಿಂದಿಸಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಅದನ್ನು ನೋಡಿ ಆಕ್ರೋಶಗೊಂಡ ಜನರು ಆಕೆಯನ್ನು ವಜಾಗೊಳಿಸಲು ಪಟ್ಟುಹಿಡಿದಿದ್ದರು.
ಈ ಬಗ್ಗೆ ಕ್ರಮ ವಹಿಸಿರುವ ಲವ್ಲಿ ವಿಶ್ವವಿದ್ಯಾಲಯವು ಪ್ರಾಧ್ಯಾಪಕಿಯನ್ನು ಕೆಲಸದಿಂದ ಕಿತ್ತುಹಾಕಿದೆ.
ವಿವಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಹಾಯಕ ಪ್ರಾಧ್ಯಾಪಕಿಯ ಮಾತುಗಳಿಂದ ಜನರಿಗೆ ನೋವುಂಟಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆಕೆ ಹಂಚಿಕೊಂಡ ಅಭಿಪ್ರಾಯಗಳು ಸಂಪೂರ್ಣವಾಗಿ ವೈಯಕ್ತಿಕವಾಗಿವೆ. ವಿಶ್ವವಿದ್ಯಾನಿಲಯವು ಇಂತಹ ಮಾತುಗಳನ್ನು ಅನುಮೋದಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಇದೊಂದು ಜಾತ್ಯಾತೀತ ವಿಶ್ವವಿದ್ಯಾನಿಲಯವಾಗಿದೆ. ಇಲ್ಲಿ ಎಲ್ಲಾ ಧರ್ಮಗಳು ಮತ್ತು ಜನರ ನಂಬಿಕೆಯನ್ನು ಸಮಾನವಾಗಿ ಪ್ರೀತಿ ಮತ್ತು ಗೌರವದಿಂದ ನೋಡಲಾಗುತ್ತದೆ. ತಕ್ಷಣದಿಂದ ಜಾರಿಗೆ ಬರುವಂತೆ ಸಹಾಯಕ ಪ್ರಾಧ್ಯಾಪಕಿಯನ್ನು ಸೇವೆಗಳಿಂದ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಈ ಘಟನೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ, ”ಎಂದು ಹೇಳಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ