ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೊಮ್ಮೆ ತಮ್ಮದೇ ಶೈಲಿಯಲ್ಲಿ ಹಿಂದೂಗಳಿಗೆ ಕರೆ ನೀಡಿದ್ದಾರೆ. ಜಿಹಾದಿಗಳ ದಾಳಿಯ ವೇಳೆ ಹಿಂದೂಗಳು ಬಿಲ್ಲು ಬಾಣಗಳನ್ನು ಹಿಡಿದು ಪ್ರತಿಭಟಿಸಲು ಸಿದ್ಧರಾಗಿರಬೇಕು ಎಂದು ಕರೆ ನೀಡಿದ್ದಾರೆ. ತಮ್ಮ ಫೇಸ್ಬುಕ್ ಪುಟದಲ್ಲಿ ಹೀಗೆ ಬರೆದುಕೊಂಡಿರುವ ಸಾಕ್ಷಿ ಮಹಾರಾಜ್ ತಲೆಯ ಮೇಲೆ ಟೋಪಿ ಧರಿಸಿ, ಕೈಯಲ್ಲಿ ಕೋಲುಗಳನ್ನು ಹೊಂದಿರುವ ಜನರ ಗುಂಪು ದಾಳಿಗೆ ಹೋಗುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಗುಂಪು (ಜನಸಮೂಹ) ನಿಮ್ಮ ಬೀದಿ, ನಿಮ್ಮ ಮನೆಗಳ ಮೇಲೆ ದಾಳಿ ಮಾಡಲು ಬಂದರೆ ಹಿಂದುಗಳು ಅವರನ್ನು ಸಮರ್ಥವಾಗಿ ಎದುರಿಸಲು ಬಿಲ್ಲು, ಬಾಣಗಳೊಂದಿಗೆ ಸಿದ್ಧರಾಗಿರಬೇಕು. ಅವರು ಗಾಜಿನ ಬಾಟಲಿಗಳೊಂದಿಗೆ ದಾಳಿ ಮಾಡಿದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಬೇರೆ ಯಾವುದಾದರೂ ಯಾವುದೇ ಆಯುಧ ನಿಮ್ಮ ಬಳಿ ಇದೆಯಾ..? ಎಂದು ಪ್ರಶ್ನಿಸಿದ್ದಾರೆ. ಪೋಲೀಸರು ನಿಮ್ಮನ್ನು ರಕ್ಷಿಸಲು ಬರುವುದಿಲ್ಲ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು, ನಿಮ್ಮನ್ನು ರಕ್ಷಿಸಿಕೊಳ್ಳುವುದರೊಂದಿಗೆ ಇತರೆ ಹಿಂದೂಗಳನ್ನು ರಕ್ಷಿಸಬೇಕು.
ಪೋಲೀಸರು ನಿಮ್ಮ ರಕ್ಷಣೆಗೆ ಬರುವುದಿಲ್ಲ, ಬದಲಿಗೆ ಜೀವ ಉಳಿಸಿಕೊಳ್ಳಲು ಎಲ್ಲೋ ಅಡಗಿಕೊಂಡಿರುತ್ತಾರೆ. ಜಿಹಾದ್ ಮುಗಿದು ದಾಳಿಕೋರರು ಹೋದ ನಂತರವೇ ಪೊಲೀಸರು ಬರುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಂತಹ ಅತಿಥಿಗಳಿಗಾಗಿ ಪ್ರತಿ ಮನೆಯಲ್ಲಿ ಎರಡು ಕೇಸ್ ಗಾಜಿನ ಬಾಟಲಿಗಳು, ಕೂಲ್ಡ್ರಿಂಕ್ ಬಾಟಲಿಗಳು, ಬಿಲ್ಲು ಮತ್ತು ಬಾಣಗಳನ್ನು ಇಟ್ಟುಕೊಂಡಿರಬೇಕು ಎಂದು ಪೋಸ್ಟ್ ಮಾಡಿ ಕೊನೆಗೆ ‘ಜೈಶ್ರೀರಾಮ್’ ಎಂದಿದ್ದಾರೆ.
ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಸಾಕ್ಷಿ ಮಹಾರಾಜ್ ಅವರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವುದನ್ನು ಒಪ್ಪಿಕೊಂಡಿದ್ದು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.