ಮಡಿಕೇರಿ | ಸಹಕಾರ ಭಾರತಿ ಸದಸ್ಯತ್ವ ಆಂದೋಲನಕ್ಕೆ ಚಾಲನೆ

ಹೊಸ ದಿಗಂತ ವರದಿ, ಮಡಿಕೇರಿ:

ಹಲವು ವರ್ಷಗಳ ತಪಸ್ಸಿನ ಫಲದಿಂದ ಸಹಕಾರಿ ಭಾರತಿ ಬೆಳೆದು ನಿಂತಿದ್ದು, ಸಹಕಾರ ಕ್ಷೇತ್ರದಲ್ಲಿ ಶ್ರಮವಹಿಸಿ ದುಡಿದರೆ ಜನರು ಗುರುತಿಸುತ್ತಾರೆ ಮತ್ತು ಯಶಸ್ಸು ಸಾಧಿಸಬಹುದು ಎಂದು ಸಹಕಾರ ಭಾರತಿ ಸಂರಕ್ಷಕ ರಮೇಶ್ ವೈದ್ಯ ನುಡಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಸಹಕಾರ ಭಾರತಿ ಸದಸ್ಯತ್ವ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಹಕಾರ ಭಾರತಿ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಮತ್ತು ದೇಶವ್ಯಾಪಿ ತನ್ನ ಕಾರ್ಯಕ್ಷೇತ್ರ ಹೊಂದಿರುವ ಸಂಸ್ಥೆಯಾಗಿದೆ. ಸಹಕಾರಿ ಕ್ಷೇತ್ರದ ವೃದ್ಧೀಕರಣ ಹಾಗೂ ಆಧುನೀಕರಣದ ದೃಷ್ಟಿಕೋನದಲ್ಲಿ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ಅವಿರತವಾಗಿ ಸಹಕಾರ ಭಾರತಿ ಶ್ರಮಿಸುತ್ತಿದೆ ಎಂದರು.
ಸಹಕಾರ ಭಾರತಿಯ ರಾಜ್ಯ ಉಪಾಧ್ಯಕ್ಷರಾದ ರವಿಬಸಪ್ಪ ಅವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಸಿಗುವ ಗೌರವ, ನೆಮ್ಮದಿ, ಉಳಿದ ಯಾವುದೇ ಕೇತ್ರದಲ್ಲಿ ಸಿಗುವುದಿಲ್ಲ. ಸಹಕಾರ ರಂಗದಲ್ಲಿ ಹಣಕ್ಕಿಂತ, ವ್ಯಕ್ತಿಗೆ ಗೌರವ ಸಿಗುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯ ಜನರು ಒಟ್ಟಾಗಿ ಕೈ ಜೋಡಿಸಿ ಜಿಲ್ಲೆಯಲ್ಲಿ ಸಹಕಾರ ಸಂಘಗಳನ್ನು ಬೆಳೆಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಮನುಮುತ್ತಪ್ಪ ಅವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಜಿಲ್ಲೆಯು ತನ್ನದೇ ಆದ ಕೊಡುಗೆ ನೀಡಿದೆ. ಸ್ವಾತಂತ್ರ್ಯ ನಂತರದಲ್ಲಿ ಕೃಷಿಪತ್ತಿನ ಸಹಕಾರ ಸಂಘಗಳ ಉದಯದಿಂದ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಾ ಬಂದಿದೆ. ಜಿಲ್ಲೆಯಲ್ಲಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಪರಿಶ್ರಮದಿಂದ ದುಡಿದ ಕಾರಣ ಸಹಕಾರ ಸಂಘಗಳು ಬೆಳೆದಿವೆ ಎಂದು ಹೇಳಿದರು.
ಜಿಲ್ಲೆಯ ಸಹಕಾರ ಕ್ಷೇತ್ರಗಳು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿವೆ. ಸಹಕಾರ ಕ್ಷೇತ್ರವು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಹಕಾರಿಗಳ ಕಠಿಣ ಶ್ರಮ ಪ್ರಾಮಾಣಿಕತೆಯ ಫಲವಾಗಿ ಸಹಕಾರ ಸಂಘಗಳು ಜಿಲ್ಲೆಯಲ್ಲಿ ಪ್ರಬಲವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ್ ಶೀಲವಂತ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಭಾರತಿಯನ್ನು ಇನ್ನಷ್ಟು ಬಲಪಡಿಸುವ ಕೆಲಸ ಆಗಬೇಕು. ಎಲ್ಲರೂ ಪರಿಶ್ರಮದಿಂದ ಪ್ರಾಮಾಣಿಕತೆಯಿಂದ ದುಡಿಯುವಂತಾಗಬೇಕು ಎಂದು ಹೇಳಿದರು.
ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ದುಡಿಯಲು ಅವಕಾಶಗಳಿವೆ. ಕಾಲೇಜು ಶಿಕ್ಷಣ ಮುಗಿಸಿದ ನಂತರ ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದ ಎಂ.ಬಿ.ದೇವಯ್ಯ ಅವರನ್ನು ಗೌರವಿಸಲಾಯಿತು. ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷ ಉಮೇಶ್ ಉತ್ತಪ್ಪ ಅವರು ಸಹಕಾರ ಭಾರತಿಯ ವಾರ್ಷಿಕ ವರದಿ ಮಂಡಿಸಿದರು.ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಕಾರ್ಯದರ್ಶಿ ಮತ್ತು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್, ಸಹಕಾರ ಭಾರತಿ ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀನಾ ಬೊಳ್ಳಮ್ಮ ಮತ್ತಿತರರು ಇದ್ದರು.
ಉಮೇಶ್ ಉತ್ತಪ್ಪ ಸ್ವಾಗತಿಸಿದರೆ, ಬೀನಾ ಬೊಳ್ಳಮ್ಮ ಪ್ರಾರ್ಥಿಸಿದರು. ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಕಾಳನ ರವಿ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!