ಹೊಸ ದಿಗಂತ ವರದಿ, ಗೋಣಿಕೊಪ್ಪ:
ಕೊಡವ ಭಾಷೆಯ ‘ಭೀರ್ಯ’ ಚಲನಚಿತ್ರ ಪ್ರದರ್ಶನಕ್ಕೆ ಗೋಣಿಕೊಪ್ಪದ ಪ್ಲಾಂಟರ್ಸ್ ಕ್ಲಬ್ನಲ್ಲಿ ಚಾಲನೆ ನೀಡಲಾಯಿತು.
ಹಿರಿಯರಾದ ತೀತಿರ ನಂಜಪ್ಪ ಅವರು ಜ್ಯೋತಿ ಬೆಳಗುವ ಮೂಲಕ ಸಿನಿಮಾ ಮೊದಲ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕೊಡವ ಭಾಷೆ ಮತ್ತು ಸಮುದಾಯವನ್ನು ಇತರೆಡೆಗೂ ಪರಿಚಯಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕೊಡವ ಸಿನಿಮಾಗಳು ತಯಾರಾಗಬೇಕಾಗಿದೆ. ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಸರ್ಕಾರ ಹೆಚ್ಚು ಅನುದಾನವನ್ನು ನೀಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ತೀತಿರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಮಾರು 1 ಗಂಟೆ 47 ನಿಮಿಷಗಳ ಭೀರ್ಯ ಚಲನಚಿತ್ರ ಮೊದಲ ಪ್ರದರ್ಶನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಿನಿಮಾ ನೋಡಿದ ನಂತರ ಬಹುತೇಕ ಸಿನಿ ಪ್ರಿಯರು ಸಿನಿಮಾದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.
ಭೀರ್ಯ ಕೊಡವ ಸಿನಿಮಾ ತೀತಿರ ಶರ್ಮಿಲಿ ಅವರ ತೀತಿರ ಸಿನಿ ಕ್ರಿಯೇಷನ್’ನಡಿ ನಿರ್ಮಾಣವಾಗಿದ್ದು, ಯುವ ನಿರ್ದೇಶಕ ಬಲ್ಯಮಿದೇರೀರ ಆರ್ಯನ್ ಮುದ್ದಪ್ಪ ನಿರ್ದೇಶನ, ಕಥೆ, ಸಂಭಾಷಣೆಯನ್ನು ನಿರ್ವಹಿಸಿದ್ದಜ, ಕನ್ನಡ ಸಿನಿಮಾದ ಸಾಹಸ ನಿರ್ದೇಶಕ ಫಯಾಜ್ ಖಾನ್ ಅವರು ಸಾಹಸ ಮತ್ತು ಚಿತ್ರದ ನಾಯಕನಾಗಿ ಆರ್ಯನ್ ಮುದ್ದಪ್ಪ ಹಾಗೂ ನಾಯಕಿಯಾಗಿ ಅಯ್ಯರಣಿಯಂಡ ಶಿಲಾನ್ ಚೋಂದಮ್ಮ, ಖಳನಾಯಕನಾಗಿ ಉಡುಪಿ ಮೂಲದ ರಾಜ್ಚರಣ್ ಹಾಗೂ ಕೊಡಗು ಮೂಲದ ಕಾಳಿಮಾಡ ವಂಶಿಕಾ, ಪ್ರಧಾನ ಪಾತ್ರದಲ್ಲಿ ಹಿರಿಯ ಕಲಾವಿದರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಮಲ್ಲಮಾಡ ತಾಮಲಾ ಸುನಿಲ್ ಜೋಡಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.