ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹುಬಲಿ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿರುವ ಪ್ರಭಾಸ್ ಸದ್ಯ ಕನ್ನಡದ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಸಲಾರ್ ಸಿನಿಮಾ ಮಾಡ್ತಿದ್ದಾರೆ. ಮುಗಿಯುವ ಹಂತದಲ್ಲಿದ್ದ ಸಿನಿಮಾಗೆ ಕೊರೊನಾ ಅಡ್ಡಗಾಲು ಹಾಕಿದೆ.
ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಚಿತ್ರವಾಗಿ ಬರುತ್ತಿರುವ ಚಿತ್ರವು ಪ್ರಭಾಸ್ ವೃತ್ತಿಜೀವನದ ಅತಿದೊಡ್ಡ ಚಿತ್ರ ಎಂಬ ಸುದ್ದಿ ಹರಿದಾಡುತ್ತಿದೆ. ಶ್ರುತಿ ಹಾಸನ್ ಚಿತ್ರದಲ್ಲಿ ಪ್ರಭಾಸ್ ಎದುರು ನಾಯಕಿಯಾಗಿ ನಟಿಸುತ್ತಿದ್ದು, ಜಗಪತಿ ಬಾಬು ಮತ್ತೊಮ್ಮೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲಾರ್ ಸಿನಿಮಾದ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ಈ ಚಿತ್ರದ ಅಪ್ಡೇಟ್ಗಾಗಿ ಪ್ರಭಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆದರೆ ಸಲಾರ್ ಟೀಮ್ನಿಂದ ಇದುವರೆಗೂ ಯಾವುದೇ ಅಪ್ಡೇಟ್ ಇಲ್ಲದ ಕಾರಣ ಪ್ರಭಾಸ್ ಅಭಿಮಾನಿಯೊಬ್ಬರು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪತ್ರ ಬರೆದು ಸಲಾರ್ ಅಪ್ಡೇಟ್ ನೀಡಿ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಮೇ ಕೊನೆಯ ವಾರದಲ್ಲಿ ಚಿತ್ರದ ಬಗ್ಗೆ ಅಪ್ಡೇಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿರುವ ಪತ್ರ ಇದೀಗ ವೈರಲ್ ಆಗಿದೆ. ಇದುವರೆಗೂ ಚಿತ್ರದ ಲುಕ್ ಬಿಟ್ಟು ಯಾವುದೇ ಅಪ್ ಡೇಟ್ ನೀಡದ ಪ್ರಶಾಂತ್ ನೀಲ್ ಈಗ ಅಭಿಮಾನಿಗಳ ಎಚ್ಚರಿಕೆಗೆ ಬಾಗುತ್ತಾರಾ ಕಾದು ನೋಡಬೇಕಿದೆ.