ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಸಿಕ್ಕಿಬಿದ್ದ ಕ್ವಾರಿ ಕೆಲಸಗಾರನನ್ನು ರಕ್ಷಣೆ ಮಾಡಲಾಯಿತು. ಸೋಮವಾರ, ಮೇ 16 ರಂದು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕಾರ್ಮಿಕ ಮೃತಪಟ್ಟಿದ್ದು, ಕ್ವಾರಿಯೊಳಗೆ ಸಿಲುಕಿರುವ ಇತರ ಮೂವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿವೆ.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ 300 ಅಡಿ ಆಳದ ಕ್ವಾರಿಯಲ್ಲಿ ಸಿಲುಕಿರುವ ಮೂವರ ರಕ್ಷಣೆಗಾಗಿ ಅರಕ್ಕೋಣಂನಿಂದ ಬಂದ ಎನ್ಡಿಆರ್ಎಫ್ ತಂಡ 24 ಗಂಟೆಗಳಿಂದ ಸತತವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈಗಾಗಲೇ ಕ್ವಾರಿಯ ಪರವಾನಗಿದಾರ ಶಂಕರಲಿಂಗಂನನ್ನು ಪೊಲೀಸರು ಬಂಧಿಸಿದ್ದಾರೆ. ಮಾಲೀಕರಾಗಿರುವ ಚೇಂಬರ್ ಸೆಲ್ವರಾಜ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ ತಂಡವನ್ನೂ ರಚಿಸಲಾಗಿದೆ.
ರಕ್ಷಣೆ ಮಾಡಿರುವ ಇಬ್ಬರ ಚಿಕಿತ್ಸೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅತ್ಯಂತ ಕಷ್ಟಕರವಾದ ಭೂಪ್ರದೇಶ ಮತ್ತು ಬಂಡೆಗಳ ಕುಸಿತ ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ಅಡ್ಡಿಯನ್ನುಂಟುಮಾಡಿವೆ.