ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸ್ವಾತಂತ್ರ್ಯ ಹೋರಾಟಗಾರ ಅಪ್ರತಿಮ ದೇಶಭಕ್ತ ರಾಷ್ಟ್ರದೃಷ್ಟ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನವನ್ನು ಆಚರಿಸಿದ ಪ್ರಧಾನಿ ಮೋದಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ದೀನ ದಲಿತರ ಉದ್ಧಾರಕ್ಕೆ ಸಾವರ್ಕರ್ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಜನ್ಮದಿನದ ಶುಭಸಂದರ್ಭದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ ಮೋದಿ “ಭಾರತ ತಾಯಿಯ ಕಠಿಣ ಪರಿಶ್ರಮಿ ಪುತ್ರ ವೀರ್ ಸಾವರ್ಕರ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು” ಎಂದು ಸ್ಮರಿಸಿದ್ದಾರೆ. ಇನ್ನು ಕೇಂದ್ರ ಗೃಹಸಚಿವ ಅಮಿತ್ ಷಾ ಕೂಡ ಸಾವರ್ಕರ್ ರವರಿಗೆ ಗೌರವನಮನ ಸಲ್ಲಿಸಿ “ಅವರ ತ್ಯಾಗಗಳು ನಮಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತವೆ. ಸಾವರ್ಕರ್ ಅವರ ಜೀವನವು ನಮಗೆಲ್ಲರಿಗೂ ಆದರ್ಶ. ವೀರ್ ಸಾವರ್ಕರ್ ಅವರು ಒಂದೇ ಜೀವಿತಾವಧಿಯಲ್ಲಿ ಎರಡು ಜೀವಾವಧಿ ಶಿಕ್ಷೆಯನ್ನು ಪಡೆದರು. ಬಂದೀಖಾನೆಯಲ್ಲಿನ ಅಮಾನವೀಯ ಚಿತ್ರಹಿಂಸೆಗಳು ತಾಯಿ ಭಾರತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಅವರ ಸಂಕಲ್ಪವನ್ನು ತಡೆಯಲು ಸಾಧ್ಯವಾಗಲಿಲ್ಲ. ದೇಶಕ್ಕಾಗಿ ಹೇಗೆ ಬದುಕಬಹುದು ಎಂಬುದಕ್ಕೆ ಅವರ ಜೀವನವೇ ಉದಾಹರಣೆ” ಎಂದು ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.