January14, 2026
Wednesday, January 14, 2026
spot_img

ದೆಹಲಿ ಬಾಂಬ್ ಸ್ಫೋಟ: ಕೇಂದ್ರದ ವೈಫಲ್ಯ, ಗುಪ್ತಚರ ಇಲಾಖೆ ಸಂಪೂರ್ಣ ಫೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಬೋಸರಾಜು ಅವರು, ಬಿಜೆಪಿಯ ನಾಯಕತ್ವದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಚುನಾವಣೆಯ ಫಲಿತಾಂಶ ಯಾವುದೇ ಬಂದರೂ ಅದನ್ನು ಸ್ವೀಕರಿಸುವುದಾಗಿ ಹೇಳಿದ ಅವರು, “ಬಿಹಾರ ಚುನಾವಣೆಯಲ್ಲಿ ವೋಟ್ ಚೋರಿ ನಡೆದಿದೆ,” ಎಂದು ನೇರವಾಗಿ ಆರೋಪಿಸಿದರು.

‘ವೋಟ್ ಚೋರಿ’ ಆರೋಪ ಮತ್ತು ಸಾಂಸ್ಥಿಕ ವಿಶ್ವಾಸಾರ್ಹತೆ:

ಸಚಿವ ಬೋಸರಾಜು ಅವರ ಪ್ರಕಾರ, “ಬಿಜೆಪಿಯವರು ಇಡೀ ದೇಶದಲ್ಲಿ ವೋಟ್ ಚೋರಿ ಮಾಡುತ್ತಿದ್ದಾರೆ, ಬಿಹಾರದಲ್ಲೂ ಕೂಡ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ವೋಟ್ ಚೋರಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ,” ಎಂದು ಆಪಾದಿಸಿದರು.

ಅವರು ಬಿಹಾರದಲ್ಲಿ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಬೇಕು ಎಂಬುದು ಜನರ ಅಭಿಪ್ರಾಯವಾಗಿದೆ ಎಂದರು. ಈ ‘ವೋಟ್ ಚೋರಿ’ ಅಭಿಯಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಾದ್ಯಂತ ಎತ್ತಿ ಹಿಡಿಯುತ್ತಿದ್ದಾರೆ. ಬಿಹಾರದ ಫಲಿತಾಂಶ ಬಂದಾಗ ಇದು ಸತ್ಯ ಎಂದು ಸಾಬೀತಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, “ಈಗ ಚುನಾವಣಾ ಆಯೋಗ, ಇಡಿ, ಮತ್ತು ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಸಂಸ್ಥೆಗಳು ಸ್ವತಂತ್ರವಾಗಿದ್ದವು ಮತ್ತು ಯಾವುದೇ ಆರೋಪಗಳು ಇರಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕುತಂತ್ರ ರಾಜಕೀಯಕ್ಕಾಗಿ ಈ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ,” ಎಂದು ಟೀಕಿಸಿದರು. ‘ವೋಟ್ ಚೋರಿ’ ಕುರಿತು ದಾಖಲಾತಿಗಳು ಲಭ್ಯವಿದ್ದು, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಉತ್ತರ ನೀಡಬೇಕು, ಆದರೆ ಇಬ್ಬರೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಬೋಸರಾಜು ಕಿಡಿಕಾರಿದ್ದಾರೆ.

ದೆಹಲಿ ಬಾಂಬ್ ಸ್ಫೋಟಕ್ಕೆ ಕೇಂದ್ರವೇ ಹೊಣೆ:

ಇದೇ ಸಂದರ್ಭದಲ್ಲಿ, ದೆಹಲಿ ಬಾಂಬ್ ಸ್ಫೋಟದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈ ಘಟನೆಗೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳ ವೈಫಲ್ಯವೇ ಕಾರಣ ಎಂದಿದ್ದಾರೆ. “ಬಿಜೆಪಿ ಕಾಂಗ್ರೆಸ್ ಮೇಲೆ ಆರೋಪ ಮಾಡುವುದು ಬೇಡ. ಘಟನೆಗೆ ಕಾರಣವೇನು ಎಂದು ಪರಿಶೀಲಿಸಲಿ,” ಎಂದು ಅವರು ಸವಾಲು ಹಾಕಿದರು.

ಕೇಂದ್ರದ ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬೋಸರಾಜು ಪ್ರತಿಪಾದಿಸಿದರು. “ಇದು 100% ಕೇಂದ್ರ ಮತ್ತು ದೆಹಲಿ ಸರ್ಕಾರದ ವೈಫಲ್ಯ. ಕೇಂದ್ರ ಸರ್ಕಾರವೇ ಇದರ ಜವಾಬ್ದಾರಿ ಹೊರಬೇಕು. ದೇಶದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಎಚ್ಚರವಹಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.

Most Read

error: Content is protected !!