ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋಜು ಮಸ್ತಿ ಮಾಡಲು ಪುಡಿಮಡಕ ಬೀಚ್ಗೆ ತೆರಳಿದ್ದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ 12 ವಿದ್ಯಾರ್ಥಿಗಳ ಪೈಕಿ ಏಳು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಅನಕಾಪಲ್ಲಿ ಜಿಲ್ಲೆಯ ಪುಡಿಮಡಕ ಬೀಚ್ನಲ್ಲಿ ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನಿನ್ನೆ ಓರ್ವ ವಿದ್ಯಾರ್ಥಿಯ ಮೃತದೇಹ ದಡಕ್ಕೆ ತಲುಪಿದೆ. ಓರ್ವ ವಿದ್ಯಾರ್ಥಿ ಜೀವಂತವಾಗಿ ದೊರಕಿದ್ದು ಆಸ್ಪತ್ರೆಗೆ ದಾಖಲಿಸಿದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನ ಸ್ಥಿತಿ ಕೂಡ ಚಿಂತಾಜನಕವಾಗಿದ ಎನ್ನಲಾಗಿದೆ.
ನಿನ್ನೆ ಸಂಜೆ ಕತ್ತಲಾದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಇಂದು ಬೆಳಗ್ಗೆಯಿಂದ ನಾಪತ್ತೆಯಾದವರಿಗಾಗಿ ಪೊಲೀಸರು, ಈಜುಗಾರರು ಮತ್ತು ಮೀನುಗಾರರ ತಂಡ ಶೋಧ ನಡೆಸುವ ವೇಳೆ ಮತ್ತೊಬ್ಬ ವಿದ್ಯಾರ್ಥಿ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದವರಲ್ಲಿ ನರಸೀಪಟ್ಟಣಂ ಮೂಲದ ಪವನ್ ಮೃತಪಟ್ಟಿದ್ದು, ಗೋಪಾಲಪಟ್ಟಣದ ಜಗದೀಶ್, ನರಸೀಪಟ್ಟಣದ ಜಸ್ವಂತ್, ಗುಂಟೂರಿನ ಸತೀಶ್ ಮತ್ತು ಗಣೇಶ್ ಹಾಗೂ ಯಲಮಂಚಿಲಿಯ ಚಂದು ನಾಪತ್ತೆಯಾಗಿದ್ದಾರೆ.
ಮುನಗಪಾಕ ಮೂಲದ ಸೂರಿಶೆಟ್ಟಿ ತೇಜ ವಿಶಾಖಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಪತ್ತೆಯಾಗಿರುವ ಉಳಿದ ನಾಲ್ವರು ವಿದ್ಯಾರ್ಥಿಗಳಿಗಾಗಿ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ತಂಡಗಳು ಸ್ಥಳಕ್ಕೆ ತಲುಪಿವೆ. ದೋಣಿಗಳು ಮತ್ತು ಹೆಲಿಕಾಪ್ಟರ್ಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ವಿದ್ಯಾರ್ಥಿಗಳ ಪೋಷಕರು ಕಡಲತೀರದಲ್ಲಿ ತಮ್ಮ ಮಕ್ಕಳಿಗಾಗಿ ರೋಧಿಸುತ್ತಿದ್ದಾರೆ.
ಘಟನೆ ಬಗ್ಗೆ ಆಂಧ್ರ ಸಿಎಂ ಜಗನ್ ಮೋಹನ್ ದಿಗ್ಬ್ರಾಂತಿ ವ್ಯಕ್ತಪಡಿಸಿದ್ದು, ಕೂಡಲೇ ಪರಿಹಾರ ಕ್ರಮಗಳು ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಅಮರನಾಥ್ಗೆ ಸೂಚಿಸಿದರು. ವಿದ್ಯಾರ್ಥಿ ಕುಟುಂಬಗಳಿಗೆ ಧೈರ್ಯ ಹೇಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸುರಕ್ಷಿತವಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ವಿವರ ತಿಳಿದುಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದಾರೆ.