ಹೊಸದಿಗಂತ ವರದಿ, ಶಿವಮೊಗ್ಗ:
ಮತೀಯ ಶಕ್ತಿಗಳ ಮೇಲೆ ಹಾಕಲಾಗಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕೇಸುಗಳನ್ನು ಸಿದ್ದರಾಮಯ್ಯ ಸರ್ಕಾದ ಅವಧಿಯಲ್ಲಿ ವಾಪಸ್ ಪಡೆದಿರುವುದೇ ಪ್ರಸ್ತುತ ಘಟನೆಗೆ ಕಾರಣವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಅಂದಿನ ನಡೆಯಿಂದಾಗಿ ಮತೀಯ ಶಕ್ತಿಗಳು ಇಂದು ವಿಜೃಂಭಿಸುತ್ತಿವೆ. ಏನೇ ಮಾಡಿದರೂ ಏನೂ ಆಗುವುದಿಲ್ಲ ಎಂಬ ಮನೋಭಾವನೆಯಲ್ಲಿ ಕೋಮು ಶಕ್ತಿಗಳು ಇಂದು ದುಷ್ಕೃತ್ಯ ನಡೆಸುತ್ತಿವೆ. ಹಿಂದೂ ಕಾರ್ಯಕರ್ತರನ್ನೆ ಗುರಿ ಮಾಡಿಕೊಂಡು ಹತ್ಯೆ ಮಾಡಲಾಗುತ್ತಿದೆ ಎಂದರು.
ಅವರ ತಪ್ಪಿಂದಲೇ ಈ ಎಲ್ಲಾ ಘಟನೆಗಳು ನಡೆಯುತ್ತಿವೆ, ಈಗ ಸಿಎಂ, ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಕೇಳಲು ಸಿದ್ದರಾಮಯ್ಯನವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಲು ಇವರಿಗೆ ಯಾವ ನೈತಿಕತೆಯೂ ಇಲ್ಲ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿಯೇ ಕೋಮುಶಕ್ತಿಗಳ ಮೇಲಿನ ಕೇಸು ವಾಪಸ್ ಪಡೆದಿರುವುದನ್ನು ನೆನಪು ಮಾಡಿಕೊಳ್ಳಲಿ ಎಂದರು.
ಒಬ್ಬ ಕಾರ್ಯಕರ್ತನನ್ನು ಬೆಳೆಸಲು ಹತ್ತಾರು ವರ್ಷ ಬೇಕಾಗುತ್ತದೆ. ಹಾಗಿದ್ದಾಗ ಕಾರ್ಯಕರ್ತನ ಕೊಲೆಯಾದಾಗ ಆಕ್ರೋಶ ವ್ಯಕ್ತವಾಗುವುದು ಸಹಜ. ಹೀಗಾಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಫ್ ಐ ಹಾಗೂ ಎಸ್ ಡಿಪಿಐ ನಿಷೇಧ ಮಾಡಬೇಕೆಂಬ ಆಗ್ರಹ ಕಾರ್ಯಕರ್ತರದ್ದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋಮು ಉದ್ದೇಶದಿಂದ ಹತ್ಯೆ ನಡೆಸಿದ ಆರೋಪಿಗಳನ್ನು ತ್ವರಿತವಾಗಿ ಬಂಧಿಸಲಾಗುತ್ತಿದೆ. ಶೀಘ್ರ ವಿಲೇವಾರಿನ್ಯಾಯಾಲಯಗಳ ಮೂಲಕ ಪ್ರಕರಣ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ