ಹೊಸದಿಗಂತ ಡಿಜಿಟಲ್ ಡೆಸ್ಕ್:
2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿನ ಮತ್ತೋರ್ವ ಸಾಕ್ಷಿಯೂ ಉಲ್ಟಾ ಹೊಡೆದಿದ್ದಾರೆ. ಆರೋಪಿ ಸುಧಾಕರ್ ಚತುರ್ವೇದಿ ಅವರಿಗೆ 2006-07ರವರೆಗಿನ ಕೆಲ ಸಮಯದವರೆಗೆ ಸಾಕ್ಷಿಯು ಭೂಮಾಲೀಕರಾಗಿದ್ದರು. ಆದರೆ, ಎನ್ಐಎಗೆ ಯಾವುದೇ ಹೇಳಿಕೆ ನೀಡಿರುವ ಬಗ್ಗೆ ಈಗ ಅವರು ನಿರಾಕರಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ವಿಮುಖರಾಗಿರುವ 24ನೇ ಸಾಕ್ಷಿ ಇದಾಗಿದ್ದು, ಆರಂಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳಕ್ಕೆ (ಎಟಿಎಸ್) ಕೆಲ ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ನೀಡಿದ್ದರು. ಆದರೆ, ಈಗ ಅವರಲ್ಲಿ ಕೆಲವರು ಸಾಕ್ಷ್ಯದಿಂದ ವಿಮುಖರಾಗಿದ್ದಾರೆ.
ಮಾರ್ಚ್ ಆರಂಭದಲ್ಲಿ ಪ್ರಕರಣದಲ್ಲಿ ಮತ್ತೋರ್ವ ಸಾಕ್ಷಿಯೂ ವಿಮುಖರಾದರು. ಸಾಕ್ಷಿದಾರ ಸೇನೆಯ ಮಾಜಿ ಅಧಿಕಾರಿಯಾಗಿದ್ದು, ಪ್ರಕರಣದಲ್ಲಿ ವಿಮುಖರಾದ 19ನೇ ಸಾಕ್ಷಿಯಾಗಿದ್ದರು. ಎನ್ಐಎ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿದಾಗ, ಪ್ರಕರಣದಲ್ಲಿ ಆರೋಪಿಯಾಗಿರುವ ಲೆಫ್ಟಿನಂಟ್ ಕರ್ನಲ್ ಪ್ರಸಾದ್ ಎಸ್.ಎಲ್. ಪುರೋಹಿತ್ ಸಹ ಕೋರ್ಟ್ನಲ್ಲಿ ಉಪಸ್ಥಿತರಿದ್ದರು. ಲೆಫ್ಟಿನಂಟ್ ಕರ್ನಲ್ ಪುರೋಹಿತ್ರನ್ನು ಹೊರತುಪಡಿಸಿ ಸಾಕ್ಷಿಯು ಯಾರನ್ನೂ ಗುರುತಿಸಲಿಲ್ಲ.