ಹೊಸದಿಗಂತ ಡಿಜಿಟಲ್ ಡೆಸ್ಕ್
ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿನ ಕುರಿತು ಏಳು ಸದಸ್ಯರನ್ನೊಳಗೊಂಡ ಫಾರೆನ್ಸಿಕ್ ತಂಡ ತನಿಖೆ ನಡೆಸಿದ್ದು, ಅಪಘಾತಕ್ಕೆ ಕಾರಣ ಏನು ಎಂಬುದು ತಿಳಿದುಬಂದಿದೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿರುವ ಸೇತುವೆಯ ವಿನ್ಯಾಸದಲ್ಲಿ ದೋಷ ಇರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಅಲ್ಲದೆ, ಸೇತುವೆಯ ತಡಗೋಡೆಗಳು ಶೋಲ್ಡರ್ ಲೇನ್ವರೆಗೂ ವಿಸ್ತರಿಸಿದ್ದು, ತುಂಬಾ ಕಿರಿದಾಗಿರುವುದರಿಂದ ಚಾಲಕನಿಗೆ ಸರಿಹೊಂದಿಸಲು ಸಾಧ್ಯವಾಗದೆ ಕಾರನ್ನು ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾರೆ.
ಮಿಸ್ತ್ರಿ ಅವರು ಪ್ರಯಾಣ ಮಾಡುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿತ್ತು. ಅಪಘಾತದ ಬೆನ್ನಲ್ಲೇ ಎಲ್ಲ ಸುರಕ್ಷತಾ ಸಾಧನಗಳು ಸರಿಯಾಗಿ ಕಾರ್ಯ ನಿರ್ವಹಿಸಿವೆ. ಆದರೆ, ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದವರು ಸೀಟ್ ಬೆಲ್ಟ್ ಧರಿಸಿರದ ಕಾರಣ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ತನಿಖಾಧಿಕಾರಿಗಳ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.
ಇನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ರಾಜ್ಯ ಸಾರಿಗೆ ಇಲಾಖೆ ನೇಮಿಸಿದ ತಂಡವು ಅಪಘಾತಕ್ಕೀಡಾದ ವಾಹನದ ನಿಖರವಾದ ವೇಗವನ್ನು ನಿರ್ಧರಿಸಲು ಸಾಫ್ಟ್ವೇರ್ ಸಿಮ್ಯುಲೇಶನ್ಗಳು ಮತ್ತು ಮಾಡೆಲಿಂಗ್ ಅನ್ನು ನಡೆಸಿತು. ಇಅದರಲ್ಲಿ ಅಪಘಾತದ ಸಮಯದಲ್ಲಿ ಕಾರಿನ ವೇಗ ಮಿತಿಯನ್ನು ಮೀರಿತ್ತು. ಕಾರು ಗಂಟೆಗೆ 130 ರಿಂದ 140 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ತಿಳಿದುಬಂದಿದೆ.
ತನಿಖಾ ತಂಡ ಅಪಘಾತಕ್ಕೀಡಾದ ಕಾರಿನ ಹೊರಭಾಗವನ್ನು ಪರೀಕ್ಷಿಸಿದಾಗ ವಾಹನವು ಅತಿವೇಗದ ಚಾಲನೆಯನ್ನು ಸ್ಪಷ್ಟವಾಗಿ ಗುರುತಿಸಿದೆ. ಹಿಂಬದಿ ಸೀಟಿನ ಸೀಟ್ ಬೆಲ್ಟ್ಗಳನ್ನು ಬಳಸದಿರುವುದು ಮತ್ತು ಸರಿಯಾದ ಸ್ಥಿತಿಯಲ್ಲಿ ಸೀಟ್ ಬೆಲ್ಟ್ಗಳನ್ನು ಇರಿಸಿರುವುದು ಕಂಡುಬಂದಿದೆ. ಕಾರಿನ ಮುಂಭಾಗವು ನೇರವಾಗಿ ಡಿಕ್ಕಿಯಾದ ಕಾರಣ ಮುಂಭಾಗದ ಏರ್ಬ್ಯಾಗ್ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದವು. ಕಾರಿನ ಬಲಭಾಗದಲ್ಲಿರುವ ಕರ್ಟನ್ ಏರ್ಬ್ಯಾಗ್ ಕೂಡ ಕೆಲಸ ಮಾಡಿರುವುದು ಕಂಡುಬಂದಿದೆ. ಆದರೆ, ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸದ ಕಾರಣ, ಅವರು ಸೀಟ್ಗಳಿಂದ ಮುಂದಕ್ಕೆ ವೇಗವಾಗಿ ಮುಗ್ಗರಿಸಿ, ಕಾರಿನ ಮೇಲ್ಛಾವಣಿ ಮತ್ತು ಇತರ ಭಾಗಗಳಿಗೆ ಡಿಕ್ಕಿ ಹೊಡೆದು ಮಾರಣಾಂತಿಕವಾಗಿ ಗಾಯಗೊಂಡು, ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಈ ವೇಳೆ ಮರ್ಸಿಡಿಸ್ ಕಾರನ್ನು ಮುಂಬೈನ ಖ್ಯಾತ ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ ಚಲಾಯಿಸುತ್ತಿದ್ದರು. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬಳಿಯಿರುವ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತಿಮ ಕ್ರಿಯೆ ಮುಂಬೈನ ವೊರ್ಲಿಯಲ್ಲಿರುವ ಸ್ಮಶಾನದಲ್ಲಿ ನಿನ್ನೆ ನಡೆದಿದೆ.