ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲು ಶಿಕ್ಷೆ ಅನುಭವಿಸಲಾಗದೆ, ಗೋಡೆ ಹಾರಿ ಓಡಿ ಹೋದ ಕೈದಿಗಳನ್ನು ದೊಣ್ಣೆ ಮತ್ತು ಕಲ್ಲುಗಳಿಂದ ದಾಳಿ ನಡೆಸಿ ನಾಲ್ವರು ಕೈದಿಗಳನ್ನು ಹತ್ಯೆ ಮಾಡಿದ್ದಾರೆ. ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಕೈದಿಗಳು ಮೇಘಾಲಯದ ಜೋವಾಯ್ ಜೈಲಿಗೆ ಸೇರಿದವರು. ವಾಸ್ತವವಾಗಿ ಜೈಲಿನಿಂದ ಆರು ಕೈದಿಗಳು ತಪ್ಪಿಸಿಕೊಂಡಿದ್ದು ಐವರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಪ್ರಾಣ ಕಳೆದುಕೊಂಡರು.
ಐಜಿಪಿ ಜೆ.ಕೆ.ಮಾರಾಕ್ ನೀಡಿರುವ ವಿವರಗಳ ಪ್ರಕಾರ, ಜೋವಾಯ್ ಜೈಲಿನಿಂದ ಆರು ಕೈದಿಗಳು ಪರಾರಿಯಾಗಿದ್ದು, ಅವರಲ್ಲಿ ಐವರು ವಿಚಾರಣಾಧೀನ ಕೈದಿಗಳು ಶಾಂಗ್ ಪುಂಗ್ ಗ್ರಾಮವನ್ನು ತಲುಪಿದರು. ಹಳ್ಳಿಯಿಂದ ಸ್ವಲ್ಪ ದೂರದಲ್ಲಿ ಕಾಡಿನಲ್ಲಿ ಅಡಗಿಕೊಂಡಿದ್ದವರು ಹಸಿವು ತಾಳಲಾರದೆ ಆಹಾರ ಅರಸುತ್ತಾ ಓರ್ವ ಕೈದಿ ಊರೊಳಗೆ ಬಂದಿದ್ದಾನೆ. ಟೀ ಅಂಗಡಿಗೆ ಬಂದ ಆತನನ್ನು ಕೈದಿ ಎಂದು ಗುರುತಿಸಿದ ಸ್ಥಳೀಯರು ಅವನ ಬೆನ್ನು ಬಿದ್ದಿದ್ದಾಗಿ ಗ್ರಾಮದ ಮುಖಂಡ ಆರ್.ರಬನ್ ತಿಳಿಸಿದ್ದಾರೆ.
ತಪ್ಪಿಸಿಕೊಂಡ ಕೈದಿಗಳು ಕಾಡಿನಲ್ಲಿ ಅಡಗಿ ಕುಳಿತಿರುವ ವಿಚಾರ ತಿಳಿದ ಗ್ರಾಮಸ್ಥರು ಆಕ್ರೋಶಗೊಂಡು ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ನಾಲ್ವರು ಕೈದಿಗಳು ಸಾವನ್ನಪ್ಪಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಆರನೇ ಕೈದಿಯೂ ನಾಪತ್ತೆಯಾಗಿದ್ದಾನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಮೃತ ನಾಲ್ವರು ಕೈದಿಗಳ ಪೈಕಿ ಒಬ್ಬನ ಹೆಸರು ‘ಐ ಲವ್ ಯೂ ತಲಾಂಗ್’ ಎಂದು ಪೊಲೀಸರು ತಿಳಿಸಿದರು.