ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಟಿಟಾಘರ್ ಫ್ರೀ ಇಂಡಿಯಾ ಹೈಸ್ಕೂಲ್ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ತರಗತಿಗಳು ನಡೆಯುತ್ತಿರುವಾಗ ಶಾಲೆಯ ಕಟ್ಟಡದಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಮೊಹಮ್ಮದ್ ಅರಿಯನ್, ಶೇಖ್ ಬಬ್ಲು, ಸಾದಿಕ್ ಮತ್ತು ರೆಹಾನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬರು ಶಾಲೆಯ ಮಾಜಿ ವಿದ್ಯಾರ್ಥಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಫೋರೆನ್ಸಿಕ್ ತನಿಖೆಗೆ ಆದೇಶಿಸಲಾಗಿದೆ.
ಬಂಧಿತ ಆರೋಪಿಗಳು ಶಾಲೆಯ ಆವರಣದ ಮೇಲೆ ಏಕೆ ದಾಳಿ ಮಾಡಿದ್ದಾರೆ ಎಂದು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಶನಿವಾರ ರಾತ್ರಿ ಅವರನ್ನು ಕರೆದುಕೊಂಡು ಹೋಗಲಾಗಿತ್ತು ಆದರೆ ವಿಚಾರಣೆ ವೇಳೆ ಏನನ್ನೂ ಹೇಳಲಿಲ್ಲ ಎಂದು ಮೂಲಗಳು ತಿಳಿಸಿವೆ.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಿಜೆಪಿ ಸಂಸದ ದಿಲೀಪ್ ಘೋಷ್ ಈ ವಿಷಯವನ್ನು ಖಂಡಿಸಿದ್ದು “ಇದು ಹೊಸದೇನಲ್ಲ. ಇದೇ ರೀತಿಯ ರಾಜಕೀಯ ಇಲ್ಲಿ ನಡೆಯುತ್ತಿದೆ. ಕ್ರಿಮಿನಲ್ಗಳು ರಾಜಕೀಯವನ್ನು ನಿಯಂತ್ರಿಸುತ್ತಿದ್ದಾರೆ. ಕೆಲಸವಿಲ್ಲ, ಅನೇಕ ಹುಡುಗರು ತಿರುಗಾಡುತ್ತಿದ್ದಾರೆ. ಅವರಿಗೆ ಬಾಂಬ್ ಬಂದೂಕುಗಳನ್ನು ನೀಡಲಾಗುತ್ತಿದೆ.” ಎಂದು ಆರೋಪಿಸಿದ್ದಾರೆ.