ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರವಷ್ಟೇ ನಮೀಬಿಯಾದಿಂದ ಭಾರತಕ್ಕೆ ಎಂಟು ಚಿರತೆಗಳನ್ನು ಬಂದಿವೆ. ಅವುಗಳಿಗೆ ಆಹಾರವಾಗಿ ರಾಜಸ್ಥಾನದಿಂದ ಚಿತಾಲ್ ತಳಿ(ಚುಕ್ಕೆ ಜಿಂಕೆ)ಯ ಜಿಂಕೆಗಳನ್ನು ಅಲ್ಲಿಗೆ ತಂದು ಬಿಡಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ರಾಜಸ್ಥಾನದಿಂದ ಚೀತಾಲ್ ಜಿಂಕೆ ತರುವುದಕ್ಕೆ ಅಲ್ಲಿನ ಬಿಷ್ಣೋಯ್ ಸಮುದಾಯ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಈ ಸಂಬಂಧ ಪ್ರಧಾನಿ ಮೋದಿಯವರಿಗೆ ಪತ್ರವನ್ನೂ ಬರೆದಿದ್ದು, ಸರ್ಕಾರ ತನ್ನ ನಿರ್ಧಾರ ಬದಲಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಲವು ನಗರಗಳಲ್ಲಿ ಪ್ರತಿಭಟನೆಗಳನ್ನೂ ನಡೆಸಿ, ಸರ್ಕಾರದ ಈ ನಿರ್ಧಾರ ತಪ್ಪು ಎಂದು ಟೀಕಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಆದರೆ, ಈ ವಿಚಾರವಾಗಿ ಮಧ್ಯಪ್ರದೇಶ ಸರ್ಕಾರ ಪ್ರತಿಕ್ರಿಯೆ ನೀಡಿದೆ. ರಾಜಸ್ಥಾನದಿಂದ ಚಿತಾಲ್ ಜಿಂಕೆ ಕರೆದೊಯ್ದ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ಚಿರತೆಗಳನ್ನು ಬಿಡಲಾಗಿರುವ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 20 ಸಾವಿರಕ್ಕೂ ಹೆಚ್ಚು ಜಿಂಕೆಗಳಿವೆ ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆ ಸ್ಪಷ್ಟಪಡಿಸಿದ್ದು, ರಾಜಸ್ಥಾನದಿಂದ ಅವುಗಳನ್ನು ತರುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದೆ.