ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತೀಯ ಕ್ರಿಕೆಟ್ ತಂಡವು ಇತ್ತೀಚಿನ ಪ್ರಮುಖ ಪಂದ್ಯಾವಳಿಗಳ ನಿರ್ಣಾಯಕ ಘಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. 2017ರ ಚಾಂಪಿಯನ್ಸ್ ಟ್ರೋಫಿ, 2019ರ ವಿಶ್ವಕಪ್ ಮತ್ತು ಕಳೆದ ವರ್ಷದ T20 ವಿಶ್ವಕಪ್ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಪರಿಗಣಿತವಾಗಿದ್ದ ಮೆನ್ ಇನ್ ಬ್ಲೂ ಸೋಲಿನ ಆಘಾತವನ್ನು ಅನುಭವಿಸಿತು. ಮಧ್ಯಮ ಕ್ರಮಾಂಕದ ವಿಫಲತೆ, ಪಂದ್ಯದ ಅಭ್ಯಾಸದ ಕೊರತೆ ಮತ್ತು ನಾಕೌಟ್ ಆಟದಲ್ಲಿ ಒತ್ತಡ ನಿಭಾಯಿಸಲು ಸಾಧ್ಯತವಾಗದೇ ಇರುವುದು ಟೀಂ ಇಂಡಿಯಾ ಸೋಲಿಗೆ ಕಾರಣವಾಗುತ್ತಿದೆ ಎಂದು ವಿಶ್ಲೇಷಕರು ಬೊಟ್ಟುಮಾಡಿ ತೋರುತ್ತಿದ್ದಾರೆ.
ವಿಶ್ವಕಪ್ಗೆ ಮೊದಲು ಟೀಂ ಇಂಡಿಯಾ ಸಾಕಷ್ಟು ಅಭ್ಯಾಸ ಪಂದ್ಯಗಳನ್ನು ಆಡದ್ದಕ್ಕೆ ಈ ಹಿಂದಿನಿಂದಲೂ ಭಾರತ ತಂಡವನ್ನು ಕ್ರೀಡಾ ತಜ್ಞರು ಮತ್ತು ಅಭಿಮಾನಿಗಳು ಟೀಕಿಸಿದ್ದಾರೆ. ಟೂರ್ನಿಗೆ ಆತಿಥ್ಯ ವಹಿಸುವ ದೇಶದಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದ ತಂಡದ ಅಸಮರ್ಥತೆಯೇ ಸೋಲಿಗೆ ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿತ್ತು.
ಪ್ರಸ್ತುತ ಟೀಂ ಇಂಡಿಯಾ ಚುಕ್ಕಾಣಿ ಹೊತ್ತಿರುವ ಕೋಚ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಟೀಂ ಇಂಡಿಯಾ ಈ ಭಾರೀ ಕಪ್ ಗೆಲ್ಲಲೇ ಬೇಕೆಂದು ಪಣತೊಟ್ಟು ಹಲವು ಮಹತ್ವದ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಹಿಂದಿನ ಮ್ಯಾನೇಜ್ಮೆಂಟ್ಗಳು ಮಾಡಿದ ತಪ್ಪುಗಳಿಂದ ದ್ರಾವಿಡ್ ಪಾಠ ಕಲಿತಂತೆ ತೋರುತ್ತಿದೆ.
ದಿ ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದೆ ಟೀಂ ಇಂಡಿಯಾ ಕೋಚ್ ದ್ರಾವಿಡ್ ಎರಡು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳೆಂದರೆ 1. ಆಟಗಾರರನ್ನು ಆಸ್ಟ್ರೇಲಿಯಾಕ್ಕೆ ನಿಗದಿತ ಸಮಯಕ್ಕಿಂತ ಒಂದು ವಾರ ಮುಂಚಿತವಾಗಿ ಕಳುಹಿಸಿಕೊಡುವುದು. 2. ಟೀಂ ಇಂಡಿಯಾ ಐಸಿಸಿ ನಿಗದಿಪಡಿಸಿದ ಪಂದ್ಯಗಳಿಗಿಂತ ಕೆಲವು ಹೆಚ್ಚುವರಿ ಅಭ್ಯಾಸ ಪಂದ್ಯಗಳನ್ನು ಆಡುವುದು.
ದ್ರಾವಿಡ್ ಮುಂದಿಟ್ಟ ಬೇಡಿಕೆಗೆ ಬಿಸಿಸಿಐ ಸಹ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಕೋಚ್ ಸೇರಿದಂತೆ ಇಡೀ T20 ವಿಶ್ವಕಪ್ ತಂಡವು ನಿಗದಿತ ಸಮಯಕ್ಕಿಂತ ಒಂದು ವಾರ ಮುಂಚಿವಾಗಿ ಅಂದರೆ ಅಕ್ಟೋಬರ್ 5 ರಂದೇ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ.
ಭಾರತವು ತನ್ನ ಹೆಎರಡು ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗಳನ್ನು ಎದುರಿಸಲಿದೆ. ಅದಕ್ಕೂ ಮುನ್ನ ಇನ್ನೆರಡು ಪ್ರಮುಖ ತಂಡಗಳೊಂದಿಗೆ ಅಭ್ಯಾಸ ಪಂದ್ಯವಾಡಿ ಪಂದ್ಯಾವಳಿಗೆ ಸಂಪೂರ್ಣವಾಗಿ ಸಿದ್ಧವಾಗುವುದು ಟೀಂ ಇಂಡಿಯಾ ಪ್ಲಾನ್ ಆಗಿದೆ.
ʼಇತ್ತ ವಿವಿಎಸ್ ಲಕ್ಷ್ಮಣ್ ಅವರ ತರಬೇತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಟಿ 20 ಯಲ್ಲಿ ಸ್ಥಾನ ಪಡೆಯದ ಆಟಗಾರರು ಪಾಲ್ಗೊಳ್ಳುತ್ತಾರೆʼ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಮಹತ್ವದ ಪಂದ್ಯಾವಳಿಗಳಲ್ಲಿ ನಿರೀಕ್ಷಿತ ಫಲಿತಾಂಶವನ್ನು ನೀಡಲು ವಿಫಲವಾದ ನಂತರ ದ್ರಾವಿಡ್ ಮುಖ್ಯ ಕೋಚ್ ಮತ್ತು ರೋಹಿತ್ ಶರ್ಮಾ ಅವರನ್ನು ನೇಮಿಸಲಾಗಿದೆ.
ಕೋಚ್ ದ್ರಾವಿಡ್ ಮತ್ತು ರೋಹಿತ್ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಬಿಸಿಸಿಐಗೆ ಮೆಚ್ಚುಗೆಯಿದೆ ಎಂದು ತಿಳಿದುಬಂದಿದೆ.
ಭಾರತ ಅಕ್ಟೋಬರ್ 23 ಸಾಂಪ್ರದಾಯಕ ಎದುರಾಳಿ ಪಾಕ್ ವಿರುದ್ಧದ ಪಂದ್ಯದ ಮೂಲಕ ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ಆ ಬಳಿಕಅರ್ಹತಾ ಸುತ್ತಿನ ತಂಡ, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಮತ್ತೊಂದು ಅರ್ಹತಾ ಸುತ್ತಿನ ತಂಡದ ವಿರುದ್ಧ ಲೀಗ್ ಹಂತದಲ್ಲಿ ಸೆಣಸಲಿದೆ.
ಟಿ20 ವಿಶ್ವಕಪ್ ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ