ಶೀಘ್ರವೇ ಉಗ್ರಚಟುವಟಿಕೆಗಳಿಗೆ ಅಂತ್ಯ ಹಾಡಬೇಕು: ಪೇಜಾವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ಶ್ರೀರಾಮ ಮಂದಿರದ ಕಾರ್ಯಗಳಿಗೆ ಸಂಕ್ರಾಂತಿ ಬಳಿಕ ಬಹುತೇಕ‌ ವೇಗ ಸಿಗಲಿದೆ ಎಂದು ಅಯೋಧ್ಯೆ ಶ್ರೀರಾಮ ಮಂದಿರದ ಟ್ರಸ್ಟಿ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಸಮಸ್ತ ಭಾರತೀಯರ ಕನಸಾಗಿರುವ ಮಂದಿರದಲ್ಲಿ ಕಂಬಗಳನ್ನು ನಿಲ್ಲಿಸುವ ಕಾರ್ಯ ಸಾಗುತ್ತಿದೆ. ದೇವರನ್ನು ಕುಳ್ಳಿರಿಸುವ ಪೀಠದವರೆಗಿನ ಕಾರ್ಯ ಈಗಾಗಲೇ ಮುಗಿದಿದೆ.

ಬಾಲರಾಮ ದೇವರ ಮೂರುತಿಯನ್ನು ಅಮೃತಶಿಲೆಯಿಂದ ನಿರ್ಮಿಸುವ ವಿಚಾರ ಮುಂದಿದ್ದು ಶ್ಯಾಮಲ ರಾಮ ಇರಬೇಕು ಎಂಬ ಉದ್ದೇಶದಿಂದ ನೀಲಿ ವರ್ಣವೂ ಅದರಲ್ಲಿ ಒಳಗೊಳ್ಳಲಿದೆ. ಇದನ್ನು ಈಗಾಗಲೇ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದಕ್ಕೆ ಬೇಕಾದ ಶಿಲೆಯ ಶೋಧ ನಡೆಯುತ್ತಿದೆ ಎಂದರು.

ಉಗ್ರ ಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಶಿವಮೊಗ್ಗ ಹಾಗೂ ಕರಾವಳಿ ಭಾಗದಲ್ಲಿ ಉಗ್ರರ ಸಂಚು ಪತ್ತೆಯಾಗಿದೆ. ಇದನ್ನು ಈ ಮೊದಲೇ ಮಟ್ಟ ಹಾಕಬೇಕಿತ್ತು. ಕೇಂದ್ರ, ರಾಜ್ಯ ಸರಕಾರಗಳು ಈಗಾಗಲೇ ಬಂಧಿಸಿದವರನ್ನು ತೀವ್ರ ವಿಚಾರಣೆ ನಡೆಸಿ, ಇದರ ಮೂಲವನ್ನು ಬೇರು ಸಹಿತ ಕಿತ್ತೊಗೆಯಬೇಕು. ಈ ವಿಚಾರಗಳಿಗೆ ಕೋಮು‌ ಬಣ್ಣಹಚ್ಚುವ ಷಡ್ಯಂತ್ರ ನಡೆಯುತ್ತಿದ್ದು ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು. ದೇಶದಲ್ಲಿ ಸದಾ ಶಾಂತಿ ಸುವ್ಯವಸ್ಥೆ ಇರಬೇಕು ಎಂಬುದೇ ನಮ್ಮ ಆಶಯವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಉಗ್ರಚಟುವಟಿಕೆಗಳಿಗೆ ಅಂತ್ಯ ಹಾಡಬೇಕು ಎಂದು ಅವರು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!