ಹೊಸದಿಗಂತ ವರದಿ ಹುಬ್ಬಳ್ಳಿ:
ನಗರಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಸಮಾರಂಭ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡ ಹಿನ್ನೆಲೆ, ಕೆಲವೆ ಕ್ಷಣಗಳಲ್ಲಿ ಆರಂಭವಾಗಲಿದೆ.
ರಾಷ್ಟ್ರಪತಿ ಅವರನ್ನು ಸ್ವಾಗತಿಸಲು ಹು-ಧಾ ಮಹಾನಗರದ ಪಾಲಿಕೆ ಸದಸ್ಯರು, ರಾಜಕೀಯ ಮುಖಂಡರು, ನಗರದ ಸಂಘ ಸಂಸ್ಥೆಗಳ ಗಣ್ಯ ಮಾನ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ.
ರಾಜ್ಯದ ಜನಪದ ಕಲೆ ಹಾಗೂ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಕಲಾವಿದರ ಭಾಗವಹಿಸಿ ಸಮಾರಂಭ ಮೆರಗು ತಂದರು. ಅಷ್ಟೇ ಅಲ್ಲದೆ ನೂರಾರು ಜನ ಪೌರ ಕಾರ್ಮಿಕರು ಕಾರ್ಯಕ್ರಮ ವೀಕ್ಷಣೆ ಕಾತರರಾಗಿದ್ದಾರೆ.
ಕಲಘಟಗಿ ತಾಲೂಕಿನ ಅಳ್ನಾವರ ಸುತ್ತಮುತ್ತಲಿನ ಗ್ರಾಮದ ಧನಗರ ಗೌಳಿ ಬುಡಕಟ್ಟು ಸಮಾಜದವರು ಗಜಾ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದವರು ನೃತ್ಯ ಮಾಡುವ ಮೂಲಕ ತಮ್ಮ ಸಾಂಸ್ಕೃತಿಕ ಪ್ರಸ್ತುತ ಪಡಿಸಲಿದ್ದಾರೆ.
ರಾಷ್ಟ್ರಪತಿ ಬರುವ ದಾರಿಯಲ್ಲಿ ಭದ್ರತೆ: ನಗರದ ವಿಮಾನ ನಿಲ್ದಾಣದಿಂದ ದೇಶಪಾಂಡೆ ನಗರದ ಜಿಮ್ ಖಾನ ಮೈದಾನದ ವರೆಗೆ ಭಾರಿ ಭದ್ರತೆ ನೀಡಲಾಗಿದೆ. ಎಲ್ಲ ಕಡೆ ಪೊಲೀಸರು ಸುತ್ತುವರಿದಿದ್ದಾರೆ.
ಎಡಿಜಿಪಿ ವೇದಿಕೆ ಪರಿಶೀಲನೆ: ಬೆಳಿಗ್ಗೆ ಎಡಿಜಿಪಿ ಅಲೋಕ ಕುಮಾರ, ಪೊಲೀಸ್ ಆಯುಕ್ತ ಲಾಭೂರಾಮ, ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಸೇರಿದಂತೆ ಅನೇಕ ಪೊಲೀಸರು ವೇದಿಕೆ ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲು ಸಿಬ್ಬಂದಿಗೆ ಸೂಚಿಸಿದರು.
ಶೆಟ್ಟರ್’ಗೆ ವೇದಿಕೆ ಮೇಲೆ ಅವಕಾಶ: ರಾಷ್ಟ್ರಪತಿ ಪೌರ ಸನ್ಮಾನ ಕಾರ್ಯಕ್ರಮದ ವೇದಿಕೆ ಮೇಲೆ ಶಾಸಕ ಜಗದೀಶ ಶೆಟ್ಟರ್ ಸೇರಿದಂತೆ ನಾಲ್ವರು ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ರಾಷ್ಟ್ರಪತಿ ಸೇರಿದಂತೆ ಒಂಬತ್ತು ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಕಾರ್ಯಕ್ರಮ ನಡೆಯುವ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್ ಅವರ ಹೆಸರನ್ನೇ ಕೈ ಬಿಡಲಾಗಿದೆ ಎಂದು, ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಭಾನುವಾರ ತಡರಾತ್ರಿ ನಾಲ್ವರು ಶಾಸಕರಾದ ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ, ಅಮೃತ ದೇಸಾಯಿ ಮತ್ತು ಪ್ರಸಾದ ಅಬ್ಬಯ್ಯ ಅವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.