ಹೊಸದಿಗಂತ ವರದಿ ಬಾಗಲಕೋಟೆ:
ಹಿಂದೆ ಲೋಕಾಯುಕ್ತ ಇದ್ದರೆ ಅಂದೇ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು. ಕಾಂಗ್ರೆಸ್ ಪಕ್ಷದವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದಂತಹ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಲೋಕಾಯುಕ್ತವನ್ನೆ ಮುಚ್ಚಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸೋಮವಾರ ಇಳಕಲ್ ನಗರಕ್ಕೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಪುನಃ ಲೋಕಾಯುಕ್ತ ಪ್ರಾರಂಭ ಮಾಡಿದ್ದೇವೆ. 40 ಪರ್ಸೆಂಟ್ ಎನ್ನುವವರು ಪೂರ್ಣ ದಾಖಲೆ ಪಡೆದುಕೊಂಡು ಲೋಕಾಯುಕ್ತಕ್ಕೆ ಹೋಗಬೇಕು. ಸುಳ್ಳು ಹೇಳಿ ಯಾವುದಕ್ಕೂ ದಾಖಲೆ ಕೊಡ್ತಿಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ಪೇ ಸಿಎಂ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಮುಖ್ಯಮಂತ್ರಿಗಳ ಬಗ್ಗೆ ಒಂದು ಉದಾಹರಣೆ ಕೊಡಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು. ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಒಂದು ಗೌರವ ಇದೆ. ಯಾಕೆ ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಸಿಎಂ ಸ್ಥಾನಕ್ಕಿರುವ ಮೌಲ್ಯವನ್ನ ಕಾಂಗ್ರೆಸ್ ಅಪವಿತ್ರ ಮಾಡುತ್ತಿದೆ. ಸಿದ್ರಾಮಣ್ಣನ ಹಗರಣ ಬಹಳ ಇತ್ತು, ಈಗ ಅದನ್ನ ನಾವು ತೆಗೆಯುತ್ತೇವೆ. ಸಿದ್ದು ಸಿಎಂ ಇದ್ದಾಗ ದಾಖಲೆ ಕದ್ದು ಒಳಗಡೆ ಮುಚ್ಚಿ ಇಟ್ಟಿದ್ರು. ಹೀಗಾಗಿ ದಾಖಲೆ ಹುಡುಕುವುದು ನಮಗೆ ಕಷ್ಟವಾಗಿದೆ ಎಂದರು. ಅರ್ಕಾವತಿ, ಹಾಸ್ಟೆಲ್ ದಿಂಬು, ಮೊಟ್ಟೆ ಹೀಗೆ ಎಲ್ಲದರಲ್ಲೂ ಹಗರಣ ಮಾಡಿದ್ದಾರೆ ಎಂದು ಟೀಕಿಸಿದರು.