ಹೊಸದಿಗಂತ ವರದಿ ವಿಜಯಪುರ:
ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ತಳವಾರ, ಪರಿವಾರ ವರ್ಗಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಂತೆ ಅಧಿಕಾರಿಗಳಿಗೆ ಕೋರಲು ಹೋದ ಸಂದರ್ಭ ಕಾಂಗ್ರೆಸನ ಎಂಎಲ್ಸಿ ತಮ್ಮನ್ನು ಏಕವಚನದಲ್ಲಿ ನಿಂದಿಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಎಂಎಲ್ ಸಿ ಸುನೀಲಗೌಡ ಪಾಟೀಲ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಎದುರಲ್ಲೇ ನನ್ನನ್ನು ಏಕವಚನದಲ್ಲಿ ಅವಾಚ್ಯ ಶಬ್ದದಿಂದ ಕಾಂಗ್ರೆಸ್ ಎಂಎಲ್ಸಿ ಮಾತನಾಡಿ, ಗೂಂಡಾ ವರ್ತನೆ ತೋರಿರುವುದರ ವಿರುದ್ಧ ಆತನ ಮೇಲೆ ಪ್ರಕರಣ ದಾಖಲಿಸಲು ಕಾನೂನು ಹೋರಾಟ ನಡೆಸಲು ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವೆ ಎಂದು ಸ್ಪಷ್ಟಪಡಿಸಿದರು.
ದಶಕಗಳ ಬೇಡಿಕೆಯಾದ ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಿದ್ದು ಬಿಜೆಪಿ ಸರ್ಕಾರ. ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಅಲ್ಲದೆ ಧೀಮಂತ ನಾಯಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊನ್ನೆ ಕಲಬುರಗಿಯಲ್ಲಿ ಹಮ್ಮಿಕೊಂಡ ಬೃಹತ್ ಕಾರ್ಯಕ್ರಮದಲ್ಲಿ ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವ ಕುರಿತು ಆದೇಶವನ್ನು ಘೋಷಣೆ ಮಾಡಿದ್ದಾರೆ.
ಆದರೆ ಕಾಂಗ್ರೆಸ್ ಹಲವು ದಶಕಗಳಿಂದ ಆಡಳಿತ ನಡೆಸಿದರೂ ಈ ಸಮುದಾಯದ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ದೂರಿದರು. ಧರ್ಮ ಒಡೆಯಲು ಯತ್ನಿಸಿದವರೊಬ್ಬರು ಇದ್ದರು, ಇನ್ನು ಅವರ ಜೊತೆ ಸತೀಶ ಜಾರಕಿಹೊಳಿ ತಯಾರಾಗಿದ್ದಾರೆ. ಕಾಂಗ್ರೆಸ್ ಪಾಪದ ಕೊಡ ತುಂಬಿದೆ ಎಂದು ಕಿಡಿ ಕಾರಿದರು.