ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಾದಾತ್ಮಕ ಹುಬ್ಬಳ್ಳಿಯ ಚೆನ್ನಮ್ಮ(ಈದ್ಗಾ) ಮೈದಾನದಲ್ಲಿ ಟಿಪ್ಪುಜಯಂತಿ ಆಚರಣೆಗೆ ಅನುಮತಿ ನೀಡಲಾಗಿದೆ. ಬಿಜೆಪಿ ಆಡಳಿತವಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್ಡಿಎಂಸಿ) ಬುಧವಾರ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದೆ.
ಅಸಾಸುದ್ದೀನ್ ಓವೈಸಿ ಅವರ ಪಕ್ಷವಾದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಸಮತಾ ಸೈನಿಕ ದಳದಿಂದ ಸಲ್ಲಿಸಲಾಗಿದ್ದ ಅರ್ಜಿಗೆ ಅನುಮತಿ ನೀಡಲಾಗಿದೆ. ಎಲ್ಲಾ ಭಾಗೀದಾರರು, ಸದಸ್ಯರು ಮತ್ತು ನಾಗರಿಕ ಮಂಡಳಿಯ ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗವಹಿಸಿದ್ದ ಸಭೆಯಲ್ಲಿ ಅನುಮತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇದರ ಜೊತೆಯಲ್ಲಿಯೇ ಮೈದಾನದಲ್ಲಿ ಟಿಪ್ಪು ಜಯಂತಿ ಜೊತೆಗೆ ವೀರರಾಣಿ ಒನಕೆ ಓಬವ್ವ ಜಯಂತಿ ಹಾಗೂ ಭಕ್ತ ಕನಕದಾಸರ ಜಯಂತಿ ಆಚರಣೆಗೂ ಪಾಲಿಕೆ ವತಿಯಿಂದ ಶುಕ್ರವಾರ ಅನುಮತಿ ನೀಡಲಾಗಿದೆ. ಟಿಪ್ಪು ಜಯಂತಿಯಂತೆಯೇ ಇದೇ ಮೈದಾನದಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಹಾಗೂ ಕನದಾಸ ಜಯಂತಿ ಕಾರ್ಯಕ್ರಮಗಳೂ ನಡೆಯಲಿವೆ.
ವಿವಾದಾತ್ಮಕ ಮೈದಾನವು ಸತತವಾಗಿ ಹಲವಾರು ಕಾರ್ಯಕ್ರಮಗಳಿಗೆ ವೇದಿಕೆಯಾಗುತ್ತಿರುವುದು ಇದೇ ಮೊದಲು ಎನ್ನಲಾಗಿದ್ದು ಈ ಹಿಂದೆ ಕರ್ನಾಟಕ ಹೈಕೋರ್ಟ್ನ ಆದೇಶದ ಪ್ರಕಾರ, ಮೊದಲು ಮುಸ್ಲಿಮರಿಗೆ ಮಾತ್ರ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿತ್ತು ಆದರೆ ಈ ವರ್ಷ ಗಣೇಶ ಹಬ್ಬಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಕೆಲವು ನಿರ್ಬಂಧಗಳೊಂದಿಗೆ ಕಾರ್ಯಕ್ರಮಗಳನ್ನು ಅನುಮತಿಸಲಾಗಿದೆ ಎಂದು HDMC ಯ ಪತ್ರಿಕಾ ಹೇಳಿಕೆ ತಿಳಿಸಿದೆ. ಆಯೋಜಕರು ಪೊಲೀಸರಿಂದ ಸೂಕ್ತ ಅನುಮತಿ ಮತ್ತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಭರವಸೆಯೊಂದಿಗೆ ಕಾರ್ಯಕ್ರಮವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರ ನಡುವೆ ಮುಕ್ತಾಯಗೊಳಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಟಿಪ್ಪು ಸುಲ್ತಾನ್ ಅವರ ಫೋಟೋಗಳನ್ನು ಪ್ರದರ್ಶಿಸಲು ಸಂಘಟಕರಿಗೆ ಅನುಮತಿ ನೀಡಲಾಗಿದೆ, ಆದರೆ ಸುತ್ತಮುತ್ತಲು ವಿವಾದಾತ್ಮಕ ಬ್ಯಾನರ್ ಅಥವಾ ಚಿತ್ರವನ್ನು ಹಾಕದಂತೆ ನಿರ್ಬಂಧಿಸಲಾಗಿದೆ.